ಸಶಸ್ತ್ರ ಪಡೆಗಳು ಪಂಥೀಯ ಆಸಕ್ತಿಯಿಂದ ಮಲಿನವಾಗಬಾರದು: ಮನಮೋಹನ್ ಸಿಂಗ್
ಹೊಸದಿಲ್ಲಿ, ಸೆ.25: ರಫೇಲ್ ಒಪ್ಪಂದದ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವ ಮಧ್ಯೆಯೇ, ಸಶಸ್ತ್ರಪಡೆಗಳು ಪಂಥೀಯ ಆಸಕ್ತಿಯಿಂದ ಮಲಿನವಾಗದೆ ಉಳಿಯುವುದು ಬಹಳ ಮುಖ್ಯ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ. ಸಶಸ್ತ್ರಪಡೆಗಳು ಈ ದೇಶದ ಜಾತ್ಯತೀತ ರಚನೆಯ ಅತ್ಯಾಕರ್ಷಕ ಸಾಕಾರ ರೂಪಗಳು. ಇವುಗಳು ಪಂಥೀಯ ಆಸಕ್ತಿಯಿಂದ ಮಲಿನಾವದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಎಂದು ಎಬಿ ಬರ್ದನ್ ಸ್ಮರಣಾರ್ಥ ಆಯೋಜಿಸಲಾಗಿದ್ದ ಜಾತ್ಯತೀತವಾದ ಮತ್ತು ಸಂವಿಧಾನದ ರಕ್ಷಣೆ ಎಂಬ ಉಪನ್ಯಾಸದ ವೇಳೆ ಮಾತನಾಡಿದ ಸಿಂಗ್ ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ಆರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮತ್ತು ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಸಿಂಗ್, ಚುನಾವಣೆಯಲ್ಲಿ ಧರ್ಮ ಮತ್ತು ಧಾರ್ಮಿಕ ಪೂರ್ವಾಗ್ರಹಗಳು ಬಳಕೆಯಾಗದಂತೆ ದೇಶದ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯನ್ನು ಹೊತ್ತಿರುವ ಭಾರತೀಯ ಚುನಾವಣಾ ಆಯೋಗ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
Next Story