ಮಾಲೇಗಾಂವ್ ಸ್ಫೋಟ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು ರಹಿತ ಬಂಧನಾದೇಶ ಜಾರಿ
ಹೊಸದಿಲ್ಲಿ, ಅ. 8: ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಾದ ಅಜಯ್ ರಹಿರ್ಕಾರ್ ಹಾಗೂ ಸುಧಾಕರ್ ಚತುರ್ವೇದಿ ವಿರುದ್ಧ ಎನ್ಐಎ ನ್ಯಾಯಾಲಯ ಸೋಮವಾರ ಜಾಮೀನು ರಹಿತ ಬಂಧನಾದೇಶ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಎಟಿಎಸ್ ಅಪಹರಣ ನಡೆಸಿರುವ ಹಾಗೂ ಹಿಂಸೆ ನೀಡಿರುವ ಕುರಿತು ಸಿಟ್ ತನಿಖೆ ನಡೆಸುವಂತೆ ಕೋರಿ ಆರೋಪಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಸೆಪ್ಟಂಬರ್ 4ರಂದು ತಿರಸ್ಕರಿಸಿತ್ತು.
ಆದೇಶ ನೀಡಿದ ನ್ಯಾಯಾಲಯ ವಿಚಾರಣೆ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಪುರೋಹಿತ್ಗೆ ಸೂಚಿಸಿತ್ತು.
ಮುಸ್ಲಿಮರ ಪ್ರಾಬಲ್ಯ ಇರುವ ಮಾಲೆಗಾಂವ್ನಲ್ಲಿ 2008 ಸೆಪ್ಟಂಬರ್ 28ರಂದು ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 6 ಮಂದಿ ಮೃತಪಟ್ಟಿದ್ದರು ಹಾಗೂ ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಘಟನೆಗೆ ಸಂಬಂಧಿಸಿ 2008 ನೆವೆಂಬರ್ ನಲ್ಲಿ ಎಟಿಎಸ್ 11 ಜನರನ್ನು ಬಂಧಿಸಿತ್ತು. 2011 ಎಪ್ರಿಲ್ನಲ್ಲಿ ತನಿಖೆಯನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು.