ತಮಿಳು ಪತ್ರಕರ್ತ ನಕ್ಕೀರನ್ ಗೋಪಾಲ್ ಬಂಧನ
ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ವಿರುದ್ಧ ಲೈಂಗಿಕ ಹಗರಣ ಆರೋಪ
ಚೆನ್ನೈ, ಅ.9: ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರ ಕಚೇರಿ ನೀಡಿದ ದೂರಿನ ಆಧಾರದಲ್ಲಿ ತಮಿಳಿನ ಪಾಕ್ಷಿಕ ಪತ್ರಿಕೆ ‘ನಕ್ಕೀರನ್’ ಸಂಪಾದಕ, ತಮಿಳುನಾಡಿನ ಹಿರಿಯ ಪತ್ರಕರ್ತ ನಕ್ಕೀರನ್ ಗೋಪಾಲ್ ಅವರನ್ನು ಮಂಗಳವಾರ ಬೆಳಗ್ಗೆ ಚೆನ್ನೈ ನಗರ ಪೊಲೀಸರು ಬಂಧಿಸಿದ್ದಾರೆ.
ಗೋಪಾಲ್ ಅವರನ್ನು ಮಂಗಳವಾರ ಬೆಳಗ್ಗೆ 8:15ರ ಸುಮಾರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಪುಣೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗೋಪಾಲ್ ತೆರಳುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಬೆಳಕಿಗೆ ಬಂದ ವಿಶ್ವವಿದ್ಯಾಲಯದ ಲೈಂಗಿಕ ಹಗರಣದಲ್ಲಿ ರಾಜ್ಯಪಾಲ ಪುರೋಹಿತ್ ಹಾಗೂ ಅವರ ಕಚೇರಿಯ ಉನ್ನತಾಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ನಕ್ಕೀರನ್ ಪತ್ರಿಕೆಯಲ್ಲಿ ವರದಿಯಾಗಿತ್ತು ಎಂದು ಹೇಳಿರುವ ಪೊಲೀಸ್ ಅಧಿಕಾರಿಯೊಬ್ಬರು, ರಾಜಭವನ ಗೋಪಾಲ್ ವಿರುದ್ಧ ಯಾವ ರೀತಿಯ ದೂರು ನೀಡಿದೆ ಎಂದು ಬಹಿರಂಗಪಡಿಸಿಲ್ಲ.
ವಿವಿ ಲೈಂಗಿಕ ಹಗರಣದಲ್ಲಿ ರಾಜ್ಯಪಾಲ ಹಾಗೂ ಕೆಲವು ಉನ್ನತ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ವರದಿ ಬಂದ ಬಳಿಕ ತಮಿಳುನಾಡಿನ ವಿರೋಧ ಪಕ್ಷಗಳು ರಾಜ್ಯಪಾಲ ಪುರೋಹಿತ್ ರಾಜೀನಾಮೆಗೆ ಒತ್ತಾಯಿಸಿದ್ದವು.