ನಟಿ ದೀಪಿಕಾ ಪಡುಕೋಣೆ ತಲೆದಂಡಕ್ಕೆ 10 ಕೋ.ರೂ. ಘೋಷಿಸಿದ್ದ ಬಿಜೆಪಿ ನಾಯಕ ಪಕ್ಷಕ್ಕೆ ವಾಪಸ್!
ಹೊಸದಿಲ್ಲಿ, ಅ.9: ಬಾಲಿವುಡ್ನ ‘ಪದ್ಮಾವತ್’ ಚಿತ್ರ ಬಿಡುಗಡೆಗೆ ಮೊದಲು ಚಿತ್ರದ ನಟಿ ದೀಪಿಕಾ ಪಡುಕೋಣೆ ಹಾಗೂ ಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ತಲೆ ಕಡಿದರೆ 10 ಕೋ.ರೂ. ಬಹುಮಾನ ನೀಡುವುದಾಗಿ ಘೋಷಿಸಿ ಕುಖ್ಯಾತಿ ಪಡೆದಿದ್ದ ವಿವಾದಿತ ನಾಯಕ ಸೂರಜ್ ಪಾಲ್ ಅಮು ಬಿಜೆಪಿಗೆ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ತಿರಸ್ಕರಿಸಲಾಗಿದೆ.
‘‘ನನ್ನ ಮನೆಗೆ ವಾಪಸಾಗಲು ನನಗೆ ಸಂತೋಷವಾಗುತ್ತಿದೆ. ಕೆಲವು ತಿಂಗಳ ಹಿಂದೆ ಭಾರತೀಯ ಜನತಾ ಪಕ್ಷದ ಹರ್ಯಾಣದ ಘಟಕದ ಹಲವು ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೆ. ಹರ್ಯಾಣದ ಬಿಜೆಪಿ ಅಧ್ಯಕ್ಷ ಸುಭಾಶ್ ಬರಾಲ ತನ್ನ ರಾಜೀನಾಮೆ ತಿರಸ್ಕರಿಸಿದ್ದಾರೆ. ನಾನು ಪಕ್ಷದಲ್ಲಿ 29-30 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೆ. 8 ತಿಂಗಳ ಕಾಲ ಪಕ್ಷದಿಂದ ದೂರ ಉಳಿಯಲು ತುಂಬಾ ಕಷ್ಟವಾಗಿತ್ತು’’ ಎಂದು ಅಮು ಹೇಳಿದ್ದಾರೆ.
‘ಪದ್ಮಾವತ್’ ಚಿತ್ರದ ವಿರುದ್ಧ ಪ್ರತಿಭಟನೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕರ್ಣಿ ಸೇನಾದ ಮುಖ್ಯಸ್ಥನಾಗಿದ್ದ ಅಮುಗೆ ರಾಜ್ಯಾಧ್ಯಕ್ಷ ಸುಭಾಶ್ ಶೋಕಾಸ್ ನೋಟಿಸ್ ನೀಡಿದ್ದರು. ಅಮು 2017ರ ನವೆಂಬರ್ನಲ್ಲಿ ಪಕ್ಷದ ಮಾಧ್ಯಮ ಸಂಯೋಜಕ ಸ್ಥಾನವನ್ನು ತ್ಯಜಿಸಿದ್ದರು.