ಬಿಹಾರ ಸಿಎಂ ನಿತೀಶ್ ಕುಮಾರ್ರತ್ತ ಚಪ್ಪಲಿ ತೂರಿದ ವ್ಯಕ್ತಿಗೆ ಜೆಡಿಯು ಬೆಂಬಲಿಗರಿಂದ ಥಳಿತ
ಪಾಟ್ನಾ.ಅ.11: ಮೀಸಲಾತಿ ವಿರುದ್ಧ ಪ್ರತಿಭಟಿಸುತ್ತಿದ್ದ ವ್ಯಕ್ತಿಯೋರ್ವ ಗುರುವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರತ್ತ ಚಪ್ಪಲಿಯನ್ನು ತೂರಿದ್ದು,ಕೆಲವೇ ಮೀಟರ್ಗಳ ಅಂತರದಿಂದ ಅದು ಗುರಿಯನ್ನು ತಪ್ಪಿದೆ. ಚಪ್ಪಲಿಯು ರಾಜ್ಯ ಜೆಡಿಯು ಅಧ್ಯಕ್ಷ ವಶಿಷ್ಠ ನಾರಾಯಣ ಸಿಂಗ್ ಅವರೊಂದಿಗೆ ನಿತೀಶ್ ಆಸೀನರಾಗಿದ್ದ ವೇದಿಕೆಯನ್ನು ತಲುಪದೆ ಸಭಿಕರ ಮಧ್ಯೆ ಬಿದ್ದಿದ್ದು, ಜೆಡಿಯು ಕಾರ್ಯಕರ್ತರು ಆರೋಪಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಬಿಹಾರದ ಔರಂಗಾಬಾದ್ ನಿವಾಸಿಯಾಗಿರುವ ಆರೋಪಿ ಚಂದನ್ ಎಂಬಾತನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಜನ್ಮದಿನದ ಪ್ರಯಕ್ತ ಬಾಪು ಸಭಾಘರ್ನಲ್ಲಿ ಜೆಡಿಯು ಆಯೋಜಿಸಿದ್ದ ವಿದ್ಯಾರ್ಥಿ ಸಮ್ಮೇಳನದಲ್ಲಿ ಈ ಘಟನೆ ನಡೆದಿದೆ.
ಪೊಲೀಸರು ತನ್ನನ್ನು ಸ್ಥಳದಿಂದ ಸಾಗಿಸುತ್ತಿದ್ದಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದನ್,ತಾರತಮ್ಯದಿಂದ ಕೂಡಿದ ಮೀಸಲಾತಿ ನೀತಿಯ ವಿರುದ್ಧ ನನ್ನ ಪ್ರತಿಭಟನೆಯನ್ನು ದಾಖಲಿಸಿದ್ದೇನೆ. ಅದು ದಲಿತರು ಮತ್ತು ಹಿಂದುಳಿದವರಲ್ಲಿ ಸ್ಥಿತಿವಂತರಿಗೂ ಅನುಕೂಲಗಳನ್ನು ಒದಗಿಸುತ್ತಿದೆ ಮತ್ತು ಕಡುಬಡವರು ಅದೇ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ.