ಪುತ್ರನನ್ನೇ ಹತ್ಯೆಗೈದ ಎಂಎಲ್ಸಿ ಪತ್ನಿ !
ಲಕ್ನೊ, ಅ.22: ಪುತ್ರನನ್ನು ಹತ್ಯೆ ಮಾಡಿದ ಆರೋಪದಲ್ಲಿ ಉತ್ತರಪ್ರದೇಶ ವಿಧಾನಪರಿಷತ್ ಸದಸ್ಯ ರಮೇಶ್ ಯಾದವ್ ಅವರ ದ್ವಿತೀಯ ಪತ್ನಿ ಮೀರಾ ಯಾದವ್ರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ತಡರಾತ್ರಿ ತನ್ನ ಕಿರಿಯ ಪುತ್ರ ಅಭಿಜಿತ್ ಜೊತೆ ವಾಗ್ಯುದ್ದ ನಡೆಸಿದ್ದ ಮೀರಾ, ಬಳಿಕ ಆತನ ಕತ್ತುಹಿಸುಕಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭ ಅಭಿಜಿತ್ ವಿಪರೀತ ಮದ್ಯಪಾನ ಮಾಡಿದ್ದ ಎನ್ನಲಾಗಿದೆ. ರಮೇಶ್ ಯಾದವ್ನ ಮೊದಲ ಪತ್ನಿ ಇಟಾ ಜಿಲ್ಲೆಯಲ್ಲಿರುವ ಪೂರ್ವಿಕರ ಮನೆಯಲ್ಲಿದ್ದಾರೆ. ದುರಂತ ನಡೆದ ಸಂದರ್ಭ ರಮೇಶ್ ಊರಲ್ಲಿರಲಿಲ್ಲ . ಸಾಂದರ್ಭಿಕ ಪುರಾವೆ ಹಾಗೂ ಪ್ರಾಥಮಿಕ ವಿಚಾರಣೆಯ ಬಳಿಕ ಮೀರಾ ಯಾದವ್ರನ್ನು ಕೊಲೆ ಆರೋಪದಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸೌಖ್ಯದ ಕಾರಣ ಪುತ್ರ ಅಭಿಜಿತ್ ಮೃತಪಟ್ಟಿರುವುದಾಗಿ ನೆರೆಮನೆಯವರಲ್ಲಿ ತಿಳಿಸಿದ್ದ ಮೀರಾ ಹಾಗೂ ಕುಟುಂಬಿಕರು ತರಾತುರಿಯಲ್ಲಿ ಮೃತದೇಹದ ಅಂತ್ಯಸಂಸ್ಕಾರದ ಸಿದ್ಧತೆ ನಡೆಸಿದ್ದರು. ಆದರೆ ಸಾವಿನ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ್ದ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆಗೆ ಸೂಚಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿರುವುದನ್ನು ಉಲ್ಲೇಖಿಸಿದ ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಮೀರಾ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಭಿಜಿತ್ ಪದವಿ ವಿದ್ಯಾರ್ಥಿಯಾಗಿದ್ದ.
ಕುಟುಂಬದಲ್ಲಿ ಯಾವುದೇ ವಿವಾದ ಇರಲಿಲ್ಲ. ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಎಲ್ಲರಿಗೂ ಆಘಾತವಾಗಿದೆ ಎಂದು ರಮೇಶ್ ಯಾದವ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.