ಗೋವಾದಲ್ಲಿ ಶಾಖೆಗಳನ್ನು ಮುಚ್ಚಿ ಬಿಜೆಪಿಯನ್ನು ಹೊರದಬ್ಬುವ ಪಣತೊಟ್ಟ ಮಾಜಿ ಆರೆಸ್ಸೆಸ್ ನಾಯಕ
ಸಂಕಷ್ಟದಲ್ಲಿ ಕೇಸರಿ ಪಕ್ಷ
ಪಣಜಿ, ಅ.28: ಗೋವಾದಲ್ಲಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರಿಗೆ ಪರ್ಯಾಯ ನಾಯಕನನ್ನು ಹುಡುಕಲು ಬಿಜೆಪಿ ವಿಫಲವಾಗಿದ್ದು, ಗೋವಾ ಸರ್ಕಾರದ ಕಾರ್ಯಚಟುವಟಿಕೆಗಳು ಅಕ್ಷರಶಃ ಸ್ತಬ್ಧವಾಗಿದೆ. ಇದಲ್ಲದೇ ರಾಜ್ಯದಲ್ಲಿ ಇಡೀ ಪಕ್ಷವೇ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಗೋವಾ ಆರೆಸ್ಸೆಸ್ನ ಮಾಜಿ ಮುಖಂಡ ಸುಭಾಷ್ ವೆಲಿಂಗ್ ಕರ್ ಅವರು ಇತ್ತೀಚೆಗೆ ಬಿಜೆಪಿ ವೈಖರಿಯನ್ನು ಕಟುವಾಗಿ ಟೀಕಿಸಿದ್ದು ಇದಕ್ಕೆ ನಿದರ್ಶನ. ಅಧಿಕಾರದ ಹಸಿವಿನಿಂದ ಬಿಜೆಪಿ, ಅಧಿಕಾರಕ್ಕೆ ಅಂಟಿಕೊಂಡಿದ್ದು, ಮುಖ್ಯಮಂತ್ರಿಯನ್ನು ಅಧಿಕಾರ ತ್ಯಜಿಸಲು ಬಿಡುತ್ತಿಇಲ್ಲ ಎಂದವರು ಟೀಕಿಸಿದ್ದರು.
ಪಾರಿಕ್ಕರ್ ಅವರ ಆರೋಗ್ಯ ವೇಗವಾಗಿ ಹದಗಡುತ್ತಿದ್ದು, ಅವರ ಆಪ್ತಕೂಟವೊಂದು ಅವರ ವ್ಯವಹಾರಗಳನ್ನು ನಿಯಂತ್ರಿಸುತ್ತಿದೆ. ಯಾರಿಗೂ ಪಾರಿಕ್ಕರ್ ಭೇಟಿಗೆ ಅವಕಾಶ ನೀಡುತ್ತಿಲ್ಲ. ಅವರ ವಾಸ್ತವ ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವೆಲಿಂಗ್ ಕರ್ ಹೇಳಿದ್ದಾರೆ. ಪಾರಿಕ್ಕರ್ ಅವರ ಸಹೋದರರಿಗೂ ಇತ್ತೀಚೆಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ ಎನ್ನಲಾಗುತ್ತಿದೆ. ಒಬ್ಬ ಗಣ್ಯ ಸರ್ಕಾರಿ ವಕೀಲ, ಒಬ್ಬ ವೈದ್ಯರು ಹಾಗೂ ಪಕ್ಷದ ಬೆರಳೆಣಿಕೆಯ ಪದಾಧಿಕಾರಿಗಳು ಎಲ್ಲ ಕಾರ್ಯಭಾರ ನಿಭಾಯಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಆರೋಗ್ಯ ಸಚಿವ ವಿಶ್ವಜೀತ್ ರಾಣೆ, " ಪಾರಿಕ್ಕರ್ ವಿಚಾರದಲ್ಲಿ ಪವಾಡವೇ ಸಂಭವಿಸಬೇಕು" ಎಂದು ಹೇಳಿದ್ದರು. ರಾಣೆ ಕೂಡಾ ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿ. ಪಾರಿಕ್ಕರ್ ಅವರ ಶೈಕ್ಷಣಿಕ ನೀತಿಯನ್ನು ಕಟುವಾಗಿ ಟೀಕಿಸುವ ಮೂಲಕ 2016ರ ಸೆಪ್ಟೆಂಬರ್ನಲ್ಲೇ ವೆಲಿಂಗ್ಕರ್ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದರು. ಆರೆಸ್ಸೆಸ್ ವಿರುದ್ಧ ಬಂಡೆದ್ದು, ಪರ್ಯಾಯವಾಗಿ ಗೋವಾ ಪ್ರಾಂತವನ್ನು ಭಾರತ್ ಮಾತಾ ಕಿ ಜೈ ಎಂದು ಮರುನಾಮಕರಣ ಮಾಡಿದ್ದರು. ಗೋವಾ ಬಿಜೆಪಿ ಇವರನ್ನು ಉಚ್ಚಾಟಿಸಿದ್ದು, ಕೇಂದ್ರ ಬಿಜೆಪಿ ನಾಯಕತ್ವದ ಒಪ್ಪಿಗೆ ಇಲ್ಲದೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟೀಕಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಕೂಡಾ ಇವರ ಬೆಂಬಲಿಗರು ಬಿಜೆಪಿ ವಿರುದ್ಧ ಪ್ರಚಾರ ನಡೆಸಿದ್ದು, ಇದರಿಂದಾಗಿ ಮಾಜಿ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಸೇರಿದಂತೆ ಹಲವರ ಸೋಲಿಗೆ ಕಾರಣವಾಗಿತ್ತು.
ಗೋವಾ ಆರೆಸ್ಸೆಸ್ ನ 95 ಶೇ. ಕಾರ್ಯಕರ್ತರು ಈಗ ವೆಲಿಂಗ್ಕರ್ ಅವರ ಬಂಡಾಯ ಸಂಘಟನೆಯಲ್ಲಿದ್ದಾರೆ. ಈವರೆಗೆ ಇದ್ದ ಎಲ್ಲಾ ಆರೆಸ್ಸೆಸ್ ಶಾಖೆಗಳನ್ನು ವೆಲಿಂಗ್ಕರ್ ಸಂಘಟನೆಯ ಶಕ್ತಿಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದ್ದು, ಶಾಖೆಗಳಿಗೆ ಅಸ್ತಿತ್ವವೇ ಇಲ್ಲದಂತಾಗಿದೆ. “ಗೋವಾದಲ್ಲಿ ಆರೆಸ್ಸೆಸ್ ಶಾಖೆಗಳೇ ಇಲ್ಲ. ನಮ್ಮಲ್ಲಿ 5000 ಕಾರ್ಯಕರ್ತರಿದ್ದಾರೆ ಮತ್ತು 107 ಶಕ್ತಿಕೇಂದ್ರಗಳಿವೆ. ಬಿಜೆಪಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಪಕ್ಷವನ್ನು ಮುಗಿಸುವುದೇ ನಮ್ಮ ಉದ್ದೇಶ ಎಂದವರು ಹೇಳುತ್ತಾರೆ.
ಕೃಪೆ: thewire.in