ಮ.ಪ್ರದೇಶ : ಬಿಜೆಪಿ ಸುದ್ದಿಗೋಷ್ಟಿಯ ಕುರಿತು ದೂರು ದಾಖಲಿಸಲು ಸೂಚನೆ
ಭೋಪಾಲ, ಆ.28: ಶನಿವಾರ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಭೋಪಾಲದಲ್ಲಿ ನಡೆಸಿದ ಸುದ್ದಿಗೋಷ್ಟಿಯ ಆಯೋಜಕರ ವಿರುದ್ಧ ಪೊಲೀಸ್ ದೂರು ದಾಖಲಿಸುವಂತೆ ಚುನಾವಣಾ ಆಯೋಗ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದೆ.
ಎಂ.ಪಿ.ನಗರದಲ್ಲಿದ್ದ ವಾಣಿಜ್ಯ ಕಟ್ಟಡ ಒಂದರ ಎದುರು ರಸ್ತೆ ಬದಿಯಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿದ್ದ ಸಂಬಿತ್ ಪಾತ್ರ, ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ರಾಹುಲ್ ಗಾಂಧಿಯವರನ್ನು ಟೀಕಿಸಿದ್ದರು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ವಿಪಕ್ಷ ಕಾಂಗ್ರೆಸ್, ಸಾರ್ವಜನಿಕ ಆಸ್ತಿ(ರಸ್ತೆ)ಯನ್ನು ಬಳಸಿಕೊಂಡು ಪೂರ್ವಾನುಮತಿ ಪಡೆಯದೆ ಸಂಬಿತ್ ಪಾತ್ರ ಸುದ್ದಿಗೋಷ್ಟಿ ನಡೆಸಿದ್ದಾರೆ ಎಂದು ತಿಳಿಸಿತ್ತು. ಸುದ್ದಿಗೋಷ್ಟಿ ಸಂಯೋಜಕರು ತಮಗೆ ನೀಡಿದ್ದ ಅನುಮತಿಯ ಷರತ್ತು ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿರುವ ಮಧ್ಯಪ್ರದೇಶ ಮುಖ್ಯ ಚುನಾವಣಾ ಅಧಿಕಾರಿ ವಿ.ಎಲ್.ಕಾಂತ ರಾವ್, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.
Next Story