ಟಾಟಾ ಸನ್ಸ್, ಟಿಸಿಎಸ್ನಿಂದ ನಿಯಮ ಉಲ್ಲಂಘನೆ
ಮುಂಬೈ, ಅ. 31: ಟಾಟಾ ಸನ್ಸ್ ಹಾಗೂ ಅದರ ಮುಕುಟ ಮಣಿ ಟಿಎಸ್ಎಸ್ನ ಅಧ್ಯಕ್ಷ ಹಾಗೂ ನಿರ್ದೇಶಕರ ಸ್ಥಾನದಿಂದ ಸೈರಸ್ ಮಿಸ್ಟ್ರಿ ಅವರನ್ನು ಹಠಾತ್ ವಜಾಗೊಳಿಸಿರುವುದು ಕಂಪೆನಿ ಕಾಯ್ದೆ, ಆರ್ಬಿಐ ನಿಯಮ ಹಾಗೂ ಅದಕ್ಕಿಂತ ಮುಖ್ಯವಾಗಿ ಟಾಟಾ ಸಂಘಟನೆಯ ನಿಯಮದ ಉಲ್ಲಂಘನೆ ಎಂದು ಮುಂಬೈ ಕಂಪೆನಿಗಳ ಅಸಿಸ್ಟೆಂಟ್ ರಿಜಿಸ್ಟ್ರಾರ್ ಮಾಹಿತಿ ಹಕ್ಕು ಕಾಯ್ಡೆ ಅಡಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶಾಪೂರ್ಜಿ ಪಲ್ಲೋಂಜಿ ಸಮೂಹದ ಹೂಡಿಕೆ ಘಟಕ ಆಗಸ್ಟ್ 31ರಂದು ಸಲ್ಲಿಸಿದ ಆರ್ಟಿಐ ಮನವಿಗೆ ಪ್ರತಿಕ್ರಿಯೆಯಾಗಿ ಮುಂಬೈ ಕಂಪೆನಿಗಳ ಅಸಿಸ್ಟೆಂಟ್ ರಿಜಿಸ್ಟ್ರಾರ್ ಉದಯ್ ಖೊಮಾನೆ ಈ ಮಾಹಿತಿ ನೀಡಿದ್ದಾರೆ. ಟಾಟಾ ಸನ್ಸ್ನ ಅಧ್ಯಕ್ಷ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್)ನ ನಿರ್ದೇಶಕರ ಸ್ಥಾನದಿಂದ ಮಿಸ್ಟ್ರಿ ಅವರನ್ನು ವಜಾಗೊಳಿಸಿರುವುದು 2013ರ ಕಂಪೆನಿ ಕಾಯ್ದೆ ಅಡಿಯ , ರಿಸರ್ವ್ ಬ್ಯಾಂಕ್ನ ಹಾಗೂ ಮುಖ್ಯವಾಗಿ ಟಾಟಾ ಸನ್ಸ್ನ ಅಸೋಸಿಯೇಶನ್ ಕಲಂನ 118ನೆ ನಿಯಮಗಳ ಉಲ್ಲಂಘನೆ ಎಂದು ಪ್ರತಿಕ್ರಿಯೆ ತಿಳಿಸಿದೆ. ಆದರೆ, ಈ ಬಗ್ಗೆ ವಿವರವಾದ ಹೇಳಿಕೆ ನೀಡಲು ಟಾಟಾ ಸನ್ಸ್ ವಕ್ತಾರ ನಿರಾಕರಿಸಿದ್ದಾರೆ. ‘‘ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಇದರ ಬಗ್ಗೆ ಹೇಳಿಕೆ ನೀಡಲು ಬಯಸುತ್ತಿಲ್ಲ’’ ಎಂದು ಅವರು ಹೇಳಿದ್ದಾರೆ.