ಸಾಧುಗಳು, ಕೂಲಿಕಾರ್ಮಿಕರನ್ನು ಎತ್ತಂಗಡಿ ಮಾಡಿಸಿ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸಿದ ಆದಿತ್ಯನಾಥ್
ಲಕ್ನೋ, ನ.9: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ದೀಪಾವಳಿಯ ಮುನ್ನ ಅಯೋಧ್ಯೆಯಲ್ಲಿ ಆಯೋಜಿಸಿದ್ದ ವರ್ಣರಂಜಿತ ಸಮಾರಂಭವು ಸುಮಾರು 400 ಮಂದಿ ಸಾಧುಗಳೂ ಸೇರಿದಂತೆ 1,000ಕ್ಕೂ ಅಧಿಕ ಮಂದಿಯನ್ನು ನಿರಾಶ್ರಿತರನ್ನಾಗಿಸಿದೆ.
ನವೆಂಬರ್ 6ರಂದು ರಾಜ್ಯ ಸರಕಾರ ದೀಪಗಳ ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರಯೂ ನದಿ ತೀರದ ಘಾಟ್ ಪ್ರದೇಶದಲ್ಲಿ ಆಯೋಜಿಸಿತ್ತು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ರಾಜ್ಯಪಾಲ ರಾಮ್ ನಾಯ್ಕ್, ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜಂಗ್-ಸೂಕ್ ಭಾಗವಹಿಸಿದ್ದರು. ಈ ಸಮಾರಂಭ ನಡೆಯುವ ಸ್ಥಳದ ಹಾದಿಯುದ್ದಕ್ಕೂ ಒತ್ತುವರಿ ಕಾರ್ಯಾಚರಣೆ ನಡೆಸಿ ಪರಿಸರವನ್ನು ಶುಚಿಯಾಗಿಸಿ ಗಣ್ಯರಿಗೆ ಭದ್ರತೆ ಹೆಚ್ಚಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ತೆರವು ಕಾರ್ಯಾಚರಣೆಯ ಸಂತ್ರಸ್ತರು ಹೆಚ್ಚಾಗಿ ದಿನಗೂಲಿ ಕಾರ್ಮಿಕರು ಹಾಗೂ ಸಾಧುಗಳಾಗಿದ್ದು ಅವರು ಅಯೋಧ್ಯೆಯ ಮಂಝ ಪ್ರದೇಶದಲ್ಲಿ ವಾಸಿಸುತ್ತಿರುವವರಾಗಿದ್ದಾರೆ. ದಶಕಗಳಿಂದ ಸರಯೂ ನದಿ ತೀರದ ಪ್ರದೇಶವನ್ನು ಮಂಝ ಪ್ರದೇಶವೆಂದು ಹೇಳಲಾಗುತ್ತಿದೆ.
ಗಣ್ಯರ ಅನುಕೂಲಕ್ಕಾಗಿ ನಡೆದ ಅಮಾನವೀಯ ಕಾರ್ಯಾಚರಣೆಯಿಂದಾಗಿ ಮಕ್ಕಳು, ವೃದ್ಧರಿರುವ ನೂರಾರು ಕುಟುಂಬಗಳು ಹಾಗೂ ಸಾಧುಗಳು ಅನಾಥರಾಗಿದ್ದಾರೆ.
``ನಮ್ಮ ಸ್ಥಳಕ್ಕೆ ಸುಮಾರು 15 ದಿನಗಳ ಹಿಂದೆ ಮೊದಲ ಬಾರಿಗೆ ಬುಲ್ ಡೋಜರುಗಳು ಹಲವಾರು ಮಂದಿ ಪೊಲೀಸರ ರಕ್ಷಣೆಯೊಂದಿಗೆ ಆಗಮಿಸಿದ್ದವು,'' ಎಂದು ಸಾಧು ಶಂಕರ್ ದಾಸ್ ಹೇಳಿದ್ದಾರೆ. ಡಿಸೆಂಬರ್ 1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ಸಂದರ್ಭ ಅಯೋಧ್ಯೆಗೆ ಕರಸೇವಕರಾಗಿ ಆಗಮಿಸಿದವರು ಅವರಾಗಿದ್ದಾರೆ. ಅಂದಿನಿಂದ ಅವರು ಈ ಪ್ರದೇಶದಲ್ಲಿಯೇ ವಾಸಿಸುತ್ತಿದ್ದಾರೆ, ``ತೆರವು ಕಾರ್ಯಾಚರಣೆಯ ವೇಳೆ ನಮ್ಮ ಸಾಮಾನುಗಳನ್ನು ತೆಗೆಯಲೂ ನಮಗೆ ಸಮಯ ನೀಡಲಾಗಿರಲಿಲ್ಲ. ವಿರೋಧಿಸಿದವರ ಮೇಲೆ ಹಲ್ಲೆ ನಡೆಸಿ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು'' ಎಂದು ದಾಸ್ ಹೇಳಿದ್ದಾರೆ. ``ಒಂದು ದಿನ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದೆಂಬ ಬಂದ ಸುಮಾರು 400 ಸಾಧುಗಳು ಈ ಮಂಝ ಪ್ರದೇಶದಲ್ಲಿ ವಾಸವಾಗಿದ್ದಾರೆ'' ಎಂದು ಸಂತ್ರಸ್ತ ಇನ್ನೊಬ್ಬ ಸಾಧು ಶಿವಪ್ರಯಾಗ್ ಗಿರಿ ಹೇಳಿದ್ದಾರೆ.
``ನಾವು ಗಣ್ಯರ ಭದ್ರತೆಗೆ ಅಪಾಯವೊಡ್ಡುತ್ತೇವೆ ಹಾಗೂ ಸ್ಥಳವನ್ನು ಕೊಳಕಾಗಿಸಿದ್ದೇವೆ ಎಂದು ಸ್ಥಳೀಯಾಡಳಿತ ನಮಗೆ ಹೇಳಿತ್ತು'' ಎಂದು ದಿನಗೂಲಿ ಕಾರ್ಮಿಕೆ ರೇಖಾ ದೇವಿ ಹೇಳುತ್ತಾರೆ. ತನ್ನ ವೃದ್ಧ ಅತ್ತೆ, ಅಂಗವಿಕಲ ಪತಿ ಹಾಗೂ ಒಂದರಿಂದ ಐದು ವರ್ಷ ಪ್ರಾಯದ ಮೂರು ಮಕ್ಕಳ ಜತೆ ಈ ಪ್ರದೇಶದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಆಕೆಯ ಕುಟುಂಬ ಈಗ ವಸ್ತುಶಃ ಬೀದಿಗೆ ಬಿದ್ದಿದೆ. ``ನಾವು ಬಡವರಾಗಿರುವುದರಿಂದ ಕೊಳಕಾಗಿದ್ದೇವೆ. ಆದರೆ ಗಣ್ಯರಿಗೆ ನಾವು ಯಾವ ರೀತಿಯುಲ್ಲಿ ಅಪಾಯ ಸೃಷ್ಟಿಸಬಹುದೆಂಬುದು ತಿಳಿಯದಾಗಿದೆ'' ಎಂದು ಆಕೆ ಹೇಳುತ್ತಾರೆ. ಮನೆ ಖಾಲಿ ಮಾಡಲು ಸ್ವಲ್ಪ ಸಮಯ ಕೇಳಿದ ಪತಿಗೆ ಪೊಲೀಸನೊಬ್ಬ ಕೆನ್ನೆಗೆ ಬಾರಿಸಿದ್ದಾನೆ ಮತ್ತು ತಕ್ಷಣ ಸ್ಥಳ ಖಾಲಿ ಮಾಡದೇ ಇದ್ದರೆ ಜೈಲಿಗೆ ತಳ್ಳುವುದಾಗಿಯೂ ಎಚ್ಚರಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.
ದೀಪಾವಳಿಗೆ ಮುನ್ನ ಇಂತಹ ವರ್ಣರಂಜಿತ ಆಚರಣೆ ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಇದು ಎರಡನೇ ಬಾರಿ. ಆದರೆ ಈ ಬಾರಿ ಕಳೆದ ಬಾರಿಗಿಂತಲೂ ಕಾರ್ಯಕ್ರಮ ವೈಭವೋಪೇತವಾಗಿ ನಡೆದಿದೆ. ಈ ಕಾರ್ಯಕ್ರಮಕ್ಕಾಗಿ ತೆರವು ಕಾರ್ಯಾಚರಣೆಯನ್ನು ಜಿಲ್ಲಾಡಳಿತ ರಾಜ್ಯ ಸರಕಾರದ ಒತ್ತಡದಿಂದ ನಡೆಸಿತ್ತೆಂಬುದು ಸ್ಪಷ್ಟ. ಹಲವಾರು ಗುಡಿಸಲುಗಳನ್ನು ಕೆಡವಲಾಗಿದ್ದರೆ, ಕೆಡವಲು ಸಾಧ್ಯವಾಗದಂತಹ ಕಟ್ಟಡಗಳನ್ನು ದೊಡ್ಡ ಹೋರ್ಡಿಂಗುಗಳ ಹಿಂದೆ ಕಾಣದಂತೆ ಮಾಡಲಾಗಿತ್ತು ಈ ಹೋರ್ಡಿಂಗ್ಗಳಲ್ಲಿ ಆದಿತ್ಯನಾಥ್ ಹಾಗೂ ದಕ್ಷಿಣ ಕೊರಿಯಾದ ಪ್ರಥಮ ಮಹಿಳೆಯ ಚಿತ್ರಗಳಿವೆ.
ಈ ಕಾರ್ಯಕ್ರಮಕ್ಕಾಗಿ ನಗರದ ಮುಖ್ಯ ರಸ್ತೆಗಳನ್ನು ದುರಸ್ತಿಗೊಳಿಸಲಾಗಿತ್ತಲ್ಲದೆ, ನದಿ ತೀರದ ಹಳೆ ದೇವಳಗಳನ್ನು ಬಣ್ಣದ ದೀಪಗಳಿಂದ ಹಾಗೂ ನದಿ ತೀರವನ್ನು ಲಕ್ಷಗಟ್ಟಲೆ ಹಣತೆಗಳಿಂದ ಅಲಂಕರಿಸಲಾಗಿತ್ತು. ವಿಶ್ವ ದಾಖಲೆ ಸೃಷ್ಟಿಸುವ ಉದ್ದೇಶದಿಂದ ಇದನ್ನೆಲ್ಲಾ ಮಾಡಲಾಗಿತ್ತು.
ಅಷ್ಟೇ ಅಲ್ಲ ಸರಯೂ ನದಿ ತೀರದಲ್ಲಿ ರಾಮನ 30 ಅಡಿ ಎತ್ತರದ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿತ್ತು. ಅಯೋಧ್ಯೆಯಲ್ಲಿರುವ ಸಾಕಷ್ಟು ಸಮಸ್ಯೆಗಳು ಹಾಗೂ ಸ್ವಚ್ಛತೆಯ ಕೊರತೆ ಆಗಮಿಸುವ ಗಣ್ಯರ ಕಣ್ಣಿಗೆ ಎಲ್ಲಿಯೂ ಬೀಳದಿರಲಿ ಎಂಬ ಉದ್ದೇಶದಿಂದ ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಕೃಪೆ: caravanmagazine.in