ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಘ ಪರಿವಾರ ಯೋಜನೆ
ಹೊಸದಿಲ್ಲಿ, ನ. 11: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಕಾನೂನು ರೂಪಿಸುವಂತೆ ಎಲ್ಲ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರಲು ಹಾಗೂ ಸರಕಾರವನ್ನು ಒತ್ತಾಯಿಸಲು ಎಲ್ಲ ಸಂಸದೀಯ ಕ್ಷೇತ್ರದಲ್ಲಿ ಸಂಘ ಪರಿವಾರ ಸಾರ್ವಜನಿಕ ರ್ಯಾಲಿ ನಡೆಸಲಿದೆ.
ಸಂಘ ಪರಿವಾರದ ಸದಸ್ಯರು ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ಭೇಟಿಯಾಗಿದ್ದಾರೆ. ಈ ನಾಯಕರು ಆಯಾ ರಾಜ್ಯದ ರಾಜ್ಯಪಾಲರನ್ನು ಭೇಟಿಯಾಗಿ ಜನರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಬಯಸುತ್ತಿದ್ದಾರೆ ಎಂದು ತಿಳಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷದ್ನ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಆಗ್ರಹವನ್ನು ತಿಳಿಸಲಾಗುವುದು ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಎಲ್ಲ ಸಂಸದೀಯ ಕ್ಷೇತ್ರದಲ್ಲಿ ನಾವು ಸಾರ್ವಜನಿಕರ ರ್ಯಾಲಿ ಹಾಗೂ ಇತರ ಕಾರ್ಯಕ್ರಮಗಳನ್ನು ನಡೆಸಲಿದ್ದೇವೆ. ರಾಮ ಮಂದಿರ ನಿರ್ಮಾಣಕ್ಕೆ ಕಾನೂನಿಗೆ ಬೆಂಬಲ ಸೂಚಿಸಲು ಎಲ್ಲ ಸಂಸದರನ್ನು ಭೇಟಿಯಾಗಲಿದ್ದೇವೆ. ನಾಗಪುರ, ಅಯೋಧ್ಯಾ ಹಾಗೂ ಬೆಂಗಳೂರಿನಲ್ಲಿ ನವೆಂಬರ್ 23ರಂದು ಮೂರು ಸಾರ್ವಜನಿಕ ಸಭೆ ನಡೆಸಲಿದ್ದೇವೆ. ಡಿಸೆಂಬರ್ 9ರಂದು ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿ ನಡೆಸಲಿದ್ದೇವೆ ಎಂದು ಅಲೋಕ್ ಕುಮಾರ್ ಹೇಳಿದರು.