ಸಾಲ ಬಾಧೆ : ತನ್ನ ಚಿತೆಗೆ ತಾನೇ ಬೆಂಕಿ ಹಚ್ಚಿ ಆತ್ಮಹತ್ಯೆಗೈದ ರೈತ
ಸಾಂದರ್ಭಿಕ ಚಿತ್ರ
ಮುಂಬೈ,ನ.12 : ಮಹಾರಾಷ್ಟ್ರದ ನಂದೇಡ್ ಜಿಲ್ಲೆಯ ತುರತಿ ಎಂಬ ಗ್ರಾಮದಲ್ಲಿ ಸಾಲದ ಬಾಧೆಯಿಂದ ತೀವ್ರ ಕಂಗೆಟ್ಟಿದ್ದ 65 ವರ್ಷದ ರೈತನೊಬ್ಬ ತನ್ನ ಚಿತೆಗೆ ತಾನೇ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ರೈತ ಪೊತನ್ನ ರಮಲು ಬೊಲ್ಪಿಲ್ವಾಡ್ ಬ್ಯಾಂಕುಗಳಿಂದ ಸಾಕಷ್ಟು ಸಾಲ ಪಡೆದಿದ್ದು ಬೆಳೆ ನಷ್ಟದಿಂದಾಗಿ ಸಾಲ ವಾಪಸ್ ಮಾಡಲಾಗದೆ ಈ ವಿಪರೀತ ಕ್ರಮ ಕೈಗೊಂಡಿದ್ದಾನೆಂದು ಹೇಳಲಾಗಿದೆ. ರಾಜ್ಯ ಸರಕಾರದ ಸಾಲ ಮನ್ನಾ ಯೋಜನೆಗಾಗಿ ಆನ್ಲೈನ್ ಅರ್ಜಿಯನ್ನೂ ತುಂಬಿಸಿ ಕಳುಹಿಸಿದ್ದರೂ ಅವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿರಲಿಲ್ಲವೆಂದು ಹೇಳಲಾಗಿದೆ.
ಶುಕ್ರವಾರ ಸಂಜೆ ಉಮ್ರಿ ಪ್ರದೇಶದ ಸಮೀಪವಿದ್ದ ತನ್ನ ಗದ್ದೆಗೆ ತೆರಳಿದ ರೈತ ಅಲ್ಲಿಯೇ ಚಿತೆಯನ್ನು ಸಿದ್ಧಪಡಿಸಿ ಅದಕ್ಕೆ ಬೆಂಕಿ ಕೊಟ್ಟು ಆತ್ಮಹತ್ಯೆಗೈದಿದ್ದಾನೆ. ತಂದೆ ಮನೆಗೆ ಬಾರದೇ ಇರುವುದನ್ನು ನೋಡಿ ಆತನನ್ನು ಹುಡುಕಿಕೊಂಡು ಮಾರನೇ ದಿನ ರೈತನ ಪುತ್ರ ಗದ್ದೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿತ್ತು.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story