ಈ ಗ್ರಾಮದ ಮಕ್ಕಳು ಶಾಲೆಗೆ ಬಿಲ್ಲು ಬಾಣಗಳೊಂದಿಗೆ ತೆರಳುತ್ತಾರೆ !
ರಾಂಚಿ, ನ. 12: ಜಾರ್ಖಂಡ್ ರಾಜ್ಯದ ಕೈಗಾರಿಕಾ ನಗರವಾದ ಜಮ್ಶೆಡ್ ಪುರದಿಂದ ಸುಮಾರು 80 ಕಿಮೀ ದೂರದಲ್ಲಿರುವ ಪೊಚ್ಪನಿ ಎಂಬ ಗ್ರಾಮದಲ್ಲಿ ಮಕ್ಕಳು ಶಾಲೆಗೆ ಹೋಗುವಾಗ ತಮ್ಮ ಜತೆ ಬಿಲ್ಲು ಬಾಣಗಳನ್ನೂ ತೆಗೆದುಕೊಂಡು ಹೋಗುತ್ತಾರೆ.
ದಾರಿ ಮಧ್ಯದಲ್ಲಿ ಮಾವೋವಾದಿಗಳು ಎದುರಾದರೆ ಆತ್ಮರಕ್ಷಣೆಗೆಂದು ಈ ಉಪಾಯ. ಇಲ್ಲಿಯ ಶಾಲಾ ಮಕ್ಕಳು ಹೆಚ್ಚಾಗಿ ಗುಂಪುಗಳಲ್ಲಿಯೇ ತೆರಳುತ್ತಾರಲ್ಲದೆ ಮಾವೋವಾದಿಗಳು ದಾಳಿ ನಡೆಸಿದರೆ ಅವರನ್ನು ಧೈರ್ಯದಿಂದ ಎದುರಿಸುವ ಎದೆಗಾರಿಕೆ ಈ ಮಕ್ಕಳಲ್ಲಿದೆ.
ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಗಡಿ ಭಾಗದಲ್ಲಿರುವ ಈ ಗ್ರಾಮದಲ್ಲಿ ಹೆಚ್ಚಾಗಿ ಆದಿವಾಸಿಗಳು ವಾಸಿಸುತ್ತಿದ್ದು ಮಾವೋವಾದಿಗಳು ಅಲ್ಲಿನ ಪ್ರಗತಿಗೆ ಅಡ್ಡಗಾಲಿಕ್ಕುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ''ನಾವು ಮಾವೋವಾದಿಗಳಿಗೆ ಹೆದರುತ್ತಾ ಕುಳಿತರೆ ಅವರು ನಮ್ಮಲ್ಲಿ ಇನ್ನಷ್ಟು ಭೀತಿ ಹುಟ್ಟಿಸುತ್ತಾರೆ ಎಂದು ಸ್ಥಳೀಯರಾದ ರಾಮ್ ಚಂದ್ರ ಮರ್ಡಿ ಹೇಳುತ್ತಾರೆ.
ಮಾವೋವಾದಿಗಳಿಂದಾಗಿ ಆ ಗ್ರಾಮದಲ್ಲಿ ಯಾವುದೇ ಶಾಲೆಯಿಲ್ಲವಾಗಿದ್ದು ಇಲ್ಲಿನ ಮಕ್ಕಳು ದೂರದ ಶಾಲೆಗಳಿಗೆ ತೆರಳುವ ಅನಿವಾರ್ಯತೆ ಎದುರಿಸುತ್ತಿ ದ್ದಾರೆ. ಶಾಲೆಗೆ ಹೋಗಲು ಸರಿಯಾದ ರಸ್ತೆಗಳೂ ಇಲ್ಲ. ಮಕ್ಕಳು ಪ್ರತಿ ದಿನ ಕಾಡಿನ ಹಾದಿಯಲ್ಲಿ ಸಾಗಬೇಕಿದೆ.
ಕೆಲವು ಮಕ್ಕಳಿಗೆ ಮಾವೋವಾದಿಗಳ ಬಗ್ಗೆ ಭಯವಿದ್ದರೂ ಶಾಲೆ ತಪ್ಪಿಸಲು ಮಾತ್ರ ಅವರು ಸಿದ್ಧರಿಲ್ಲ. ''ಕೆಲ ಅಪರಿಚಿತ ಜನರು ಕಾಡಿನಲ್ಲಿ ಕಾಣಸಿಗುತ್ತಾರೆ. ಕೈಸನ್ನೆ ಮಾಡಿ ನಮ್ಮನ್ನು ಕರೆಯುತ್ತಾರೆ, ಆದರೆ ನಾವು ಗುಂಪಾಗಿ, ಬಿಲ್ಲು ಬಾಣ ಜತೆಗಿಟ್ಟುಕೊಂಡು ಸಾಗುವುದರಿಂದ ಅವರು ನಮ್ಮ ಹತ್ತಿರ ಬರುವುದಿಲ್ಲ'' ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸುತ್ತಾರೆ.