ಜಮ್ಮು: ಪಾಕ್ ಗುಂಡಿನ ದಾಳಿಗೆ ಭಾರತೀಯ ಯೋಧ ಬಲಿ
ಶ್ರೀನಗರ, ನ.12: ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ವಿಭಾಗದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಯೋಧ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರವಿವಾರ ಸಂಜೆ ನೌಶೇರಾ ವಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ಸೇನೆಯ 24 ಮಹಾರಾಷ್ಟ್ರ ರೆಜಿಮೆಂಟ್ನ ಮೇಲೆ ಪಾಕ್ ಪಡೆಗಳು ಹೊಂಚು ದಾಳಿ ನಡೆಸಿವೆ. ಈ ಸಂದರ್ಭ ಗಡಿಯಾಚೆಯಿಂದ ತೂರಿ ಬಂದ ಗುಂಡೇಟು ತಗುಲಿ ಸೋಮ್ಗೀರ್ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ರಕ್ಷಣಾ ಇಲಾಖೆಯ ವಕ್ತಾರ ಲೆಕ ದೇವೇಂದರ್ ಆನಂದ್ ತಿಳಿಸಿದ್ದಾರೆ. ಭಾರತೀಯ ಪಡೆಗಳು ತೀವ್ರ ಪ್ರತಿದಾಳಿ ನಡೆಸಿವೆ ಎಂದವರು ತಿಳಿಸಿದ್ದಾರೆ. ಶನಿವಾರ ಸುಂದರ್ಬನಿ ಜಿಲ್ಲೆಯಲ್ಲಿ ಇದೇ ರೀತಿಯ ದಾಳಿಯಲ್ಲಿ ಭಾರತದ ಯೋಧ ವರುಣ್ ಕಟಾಲ್ ಮೃತಪಟ್ಟಿದ್ದಾರೆ. ಈ ವರ್ಷದ ಜುಲೈವರೆಗೆ ಕಾಶ್ಮೀರ ಪ್ರದೇಶದಲ್ಲಿ ಪಾಕ್ ಪಡೆಗಳಿಂದ 1,435 ಕದನವಿರಾಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು 52 ಭಾರತೀಯರು ಬಲಿಯಾಗಿದ್ದಾರೆ ಮತ್ತು 232 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.