ನ್ಯಾಷನಲ್ ಹೆರಾಲ್ಡ್ ಕಟ್ಟಡ ಗುತ್ತಿಗೆ: ನ.22ರವರೆಗೆ ಯಥಾಸ್ಥಿತಿಗೆ ದಿಲ್ಲಿ ಉಚ್ಚ ನ್ಯಾಯಾಲಯದ ಸೂಚನೆ
ಹೊಸದಿಲ್ಲಿ,ನ.15: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕ ಸಂಸ್ಥೆ ಅಸೋಸಿಯೇಟೆಡ್ ಜರ್ನಲ್ಸ್ ಲಿ.(ಎಜೆಎಲ್)ನ ಕಟ್ಟಡ ಗುತ್ತಿಗೆ ಪ್ರಕರಣದಲ್ಲಿ ನ.22ರವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ಕೇಂದ್ರಕ್ಕೆ ಸೂಚಿಸಿದೆ.
56 ವರ್ಷಗಳ ಗುತ್ತಿಗೆಯನ್ನು ಅಂತ್ಯಗೊಳಿಸಿದ್ದ ನಗರಾಭಿವೃದ್ಧಿ ಸಚಿವಾಲಯವು ಐಟಿಒದ ಪ್ರೆಸ್ ಎನ್ಕ್ಲೇವ್ನಲ್ಲಿರುವ ಕಟ್ಟಡವನ್ನು ನ.15ರೊಳಗೆ ತೆರವುಗೊಳಿಸುವಂತೆ ಅ.30ರಂದು ಎಜೆಎಲ್ಗೆ ಆದೇಶಿಸಿತ್ತು. ಎಜೆಎಲ್ ಇದನ್ನು ಪ್ರಶ್ನಿಸಿ ನ.12ರಂದು ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.
ಎಜೆಎಲ್ನೊಂದಿಗೆ 1962,ಆ.2ರಂದು ಮಾಡಿಕೊಡಿದ್ದ ಗುತ್ತಿಗೆಯನ್ನು ಅಂತ್ಯಗೊಳಿಸಿದ್ದ ನಗರಾಭಿವೃದ್ಧಿ ಸಚಿವಾಲಯದ ಅಧೀನದಲ್ಲಿರುವ ಭೂ ಮತ್ತು ಅಭಿವೃದ್ಧಿ ಕಚೇರಿ(ಎಲ್ಡಿಓ)ಯು ಕಟ್ಟಡವನ್ನು ತನಗೆ ಹಸ್ತಾಂತರಿಸುವಂತೆೆ ಸೂಚಿಸಿತ್ತು.
ಎಲ್ಡಿಒದ ಇಬ್ಬರು ಅಧಿಕಾರಿಗಳು ನಿಯಮಕ್ಕ ವಿರುದ್ಧವಾಗಿ ನ್ಯಾಷನಲ್ ಹೆರಾಲ್ಡ್ನ ಆವರಣವನ್ನು ಪ್ರವೇಶಿಸಿದ್ದರು ಎಂದು ಎಜೆಎಲ್ ಪರ ವಕೀಲ ಅಭಿಷೇಕ ಎಂ.ಸಿಂಘ್ವಿ ಅವರು ನ್ಯಾ.ಸುನಿಲ್ ಗೌರ್ ಅವರಿಗೆ ತಿಳಿಸಿದರು. ಇದನ್ನು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ತಳ್ಳಿಹಾಕಿದಾಗ ತನ್ನ ಹೇಳಿಕೆಯನ್ನು ದೃಢಪಡಿಸುವಂತೆ ನ್ಯಾಯಾಲಯವು ಸಿಂಘ್ವ್ವಿಯವರಿಗೆ ಸೂಚಿಸಿತು. ತನ್ನ ಕಕ್ಷಿದಾರರನ್ನು ಸಂಪರ್ಕಿಸಿದ ಸಿಂಘ್ವಿ ಅವರು,ಇಬ್ಬರು ಅಧಿಕಾರಿಗಳ ಫೋಟೊಗಳು ತನ್ನ ಬಳಿಯಿವೆ ಮತ್ತು ಅವರ ಹೆಸರುಗಳು ಗೋಪಾಲ ರಸ್ತೋಗಿ ಮತ್ತು ಕೆ.ಆರ್.ರಾಣಾ ಎಂದಾಗಿವೆ ಎಂದು ತಿಳಿಸಿದರು. ಈ ವಿಷಯವನ್ನು ಪರಿಶೀಲಿಸಲಾಗುವುದು ಎಂದು ಮೆಹ್ತಾ ತಿಳಿಸಿದಾಗ ನ್ಯಾಯಾಲಯವು,ಎಲ್ಡಿಒ ಅಧಿಕಾರಿಗಳು ಈ ರೀತಿಯಲ್ಲಿ ಕಟ್ಟಡವನ್ನು ಸ್ವಾಧೀನ ಪಡಿಸಿಕೊಳ್ಳುವಂತಿಲ್ಲ. ಅವರು ಕಾನೂನಿಗನುಗುಣವಾಗಿ ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿತು.
ಆವರಣದಲ್ಲಿ ಮುದ್ರಣಾಲಯ ಕಾರ್ಯಾಚರಿಸುತ್ತಿಲ್ಲ ಎಂಬ ಕಾರಣವನ್ನು ಉಲ್ಲೇಖಿಸಿ ತೆರವಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ ಸಿಂಘ್ವಿ,ನೂತನ ಮುದ್ರಣ ಯಂತ್ರವನ್ನು ಖರೀದಿಸಲಾಗಿದೆ ಮತ್ತು ಆವರಣದಲ್ಲಿ ಸ್ಥಾಪಿಲಾಗಿದೆಯೆಂದು ತಿಳಿಸಿದರು.
ಯಂಗ್ ಇಂಡಿಯನ್ ಎಜೆಎಲ್ನ ಸಾಲವನ್ನು ವಹಿಸಿಕೊಂಡು ಅದರ ಪಾಲುದಾರನಾದಾಗ ಆವರಣವನ್ನು ಅದಕ್ಕೆ ವರ್ಗಾಯಿಸಲಾಗಿದೆ ಎಂಬ ಆರೋಪವನ್ನು ಸಿಂಘ್ವಿ ಅಲ್ಲಗಳೆದರು.