ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮುಂಬೈ ದಾಳಿ: ಮೋದಿ
ಹೊಸದಿಲ್ಲಿ, ನ. 26: ಮುಂಬೈ ಭಯೋತ್ಪಾದಕ ದಾಳಿಯ 10ನೇ ವರ್ಷವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ 26/11ರ ದಾಳಿಗೆ ಕಾಂಗ್ರೆಸ್ ಅನ್ನು ದೂರಿದ್ದಾರೆ. ವಿಧಾನ ಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದ ಭಿಲ್ವಾರದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, 10 ವರ್ಷಗಳ ಹಿಂದೆ ಕೇಂದ್ರದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇತ್ತು. ಮುಂಬೈ ಮೇಲೆ ಭಯೋತ್ಪಾದಕರ ದಾಳಿಯ ಕಾರಣಕ್ಕೆ ನವೆಂಬರ್ 26ರಂದು ಸಂಪೂರ್ಣ ಜಗತ್ತು ಆಘಾತಕ್ಕೆ ಒಳಗಾಗಿತ್ತು. ಆ ಸಂದರ್ಭ ನನಗೆ ನೆನಪಿದೆ, ಈ ದಾಳಿಯನ್ನು ಕಾಂಗ್ರೆಸ್ ರಾಜಸ್ಥಾನ ಚುನಾವಣೆಯಲ್ಲಿ ಗೆಲುವು ಗಳಿಸಲು ಬಳಸಿಕೊಂಡಿತ್ತು ಎಂದಿದ್ದಾರೆ.
ಇದೇ ಕಾಂಗ್ರೆಸ್ ಸೇನೆ ಗಡಿ ನಿಯಂತ್ರಣಾ ರೇಖೆಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸುತ್ತಿದೆ. ‘‘ಕಾಂಗ್ರೆಸ್ ಈಗ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸುತ್ತಿದೆ. ಪುರಾವೆ ನೀಡಲು ನಮ್ಮ ಕಮಾಂಡೊಗಳು ಕ್ಯಾಮರಾ ಕೊಂಡೊಯ್ಯಬೇಕಿತ್ತೇ ? ’’ ಎಂದು ಅವರು ಪ್ರಶ್ನಿಸಿದ್ದಾರೆ.
26/11ರ ದಾಳಿಯನ್ನು ಭಾರತ ಎಂದಿಗೂ ಮರೆಯಲಾರದು. ಅದು ಎಂದು ಅಪರಾಧಿಗಳನ್ನು ಮರೆಯಲಾರದು. ಕಾನೂನು ತನ್ನ ಕೆಲಸವನ್ನು ಪೂರ್ಣಗೊಳಿಸಲಿದೆ ಎಂದು ತಾನು ತನ್ನ ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು.