ಹೈಕೋರ್ಟ್ ನ್ಯಾಯಾಧೀಶರ ನಿಯೋಜನೆಯಲ್ಲಿ ಕೇಂದ್ರದ ಹಸ್ತಕ್ಷೇಪ: ಮಾಜಿ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಆರೋಪ
ಹೊಸದಿಲ್ಲಿ, ನ. 30: ಉಚ್ಚ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳ ನಿಯೋಜನೆ ಯಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪದ ಬಗ್ಗೆ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಕಟುವಾಗಿ ಟೀಕಿಸಿದ್ದಾರೆ.
ಶುಕ್ರವಾರ ಮಾದ್ಯಮಗಳೊಂದಿಗೆ ಮಾತನಾಡಿದ ಜೋಸೆಫ್, ನಿಯೋಜನೆಯಲ್ಲಿ ವಿಳಂಬವಾಗಿದೆ. ನಿಯೋಜನೆಯನು ಆಯ್ದು ವಿಳಂಬಿಸಲಾಗಿದೆ. ನಿಯೋಜನೆಯನ್ನು ತಡೆ ಹಿಡಿಯಲಾಗಿದೆ. ಇವೆಲ್ಲವೂ ಹಸ್ತಕ್ಷೇಪದ ರೀತಿಯಲ್ಲಿ ಇದೆ ಎಂದಿದ್ದಾರೆ. ನಿವೃತ್ತರಾದ ಬಳಿಕ ಸರಕಾರದ ಅಥವಾ ರಾಜಕೀಯದ ಯಾವುದೇ ರೀತಿಯ ಒತ್ತಡ ಇದುವರೆಗೆ ಅನುಭವಕ್ಕೆ ಬಂದಿಲ್ಲ ಎಂದು ಹೇಳಿಕೆ ನೀಡಿದ ಒಂದು ದಿನದ ಬಳಿಕ ಜೋಸೆಫ್ ಅವರು ಈ ಹೇಳಿಕೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಇತರ ಮೂವರುನ್ಯಾಯಾಧೀಶರೊಂದಿಗೆ ಸೇರಿ ಜನವರಿ 12ರಂದು ನಡೆಸಿದ ಪತ್ರಿಕಾಗೋಷ್ಠಿ ಹುಟ್ಟು ಹಾಕಿದ ವಿವಾದದ ಬಗ್ಗೆ ತನಗೆ ಯಾವುದೇ ವಿಷಾದ ಇಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್ ಪ್ರಕರಣಗಳ ಹಂಚಿಕೆ ಬಗ್ಗೆ ಪ್ರಶ್ನಿಸಿದ ಈಗಿನ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿರುವ ರಂಜನ್ ಗೊಗೊಯಿ, ನ್ಯಾಯಮೂರ್ತಿ ಎಂ.ಬಿ. ಲೋಕೂರು ಹಾಗೂ ಮಾಜಿ ನ್ಯಾಯಮೂರ್ತಿ ಜೆ. ಚಲಮೇಶ್ವರ್ ಗುಂಪಿನಲ್ಲಿ ಒಬ್ಬರಾಗಿದ್ದ ಜೋಸೆಫ್, ನ್ಯಾಯಾಲಯ ಈಗಿರುವುದಕ್ಕಿಂತ ಬದಲಾಗಲು ಸ್ಪಲ್ಪ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಅದು ಬದಲಾಗುತ್ತದೆ ಎಂದಿದ್ದಾರೆ.