ಕೆ.ಪಿ. ಶಶಿಕಲಾರ ವಿರುದ್ಧ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆಗೆ ಕೇರಳ ಸರಕಾರ ನಿರ್ಧಾರ
ತಿರುವನಂತಪುರಂ, ಡಿ.6: ಹಿಂದು ಐಕ್ಯ ವೇದಿ ಅಧ್ಯಕ್ಷೆ ಕೆ.ಪಿ.ಶಶಿಕಲಾರ ವಿರುದ್ಧ ಸರಕಾರ ಕೋರ್ಟಿಗೆ ಹೋಗಲಿದೆ ಎಂದು ಕೇರಳ ಮುಜರಾಯಿ ಸಚಿವ ಕಡಕಂಪ್ಪಳ್ಳಿ ಸುರೇಂದ್ರನ್ ಹೇಳಿದರು. ವಿಧಾನಸಭೆಯಲ್ಲಿ ಶಬರಿಮಲೆಗೆ ಸಂಬಂಧಿಸಿದ ಪ್ರಶ್ನೋತ್ತರ ವೇಳೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದರು.
ದೇವಸ್ವಂ ಬೋರ್ಡುಗಳ ಸಿಬ್ಬಂದಿಯ ಶೇ.60ರಷ್ಟುಕ್ರೈಸ್ತರಿದ್ದಾರೆ. ಹಿಂದೂಗಳು ಶೇ.ಒಂದರಷ್ಟು ಮಾತ್ರ ಇರುವುದು ಎಂದು ಶಶಿಕಲಾ ಮಾಡಿದ ಭಾಷಣದ ವೀಡಿಯೊ ತುಣುಕುಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದನ್ನು ಪ್ರಶ್ನಿಸಿ ಕೋರ್ಟಿನಲ್ಲಿ ಒಂದು ಕೋಟಿ ರೂಪಾಯಿ ಮಾನನಷ್ಟ ಪ್ರಕರಣ ದಾಖಲಿಸಲಾಗುವುದು ಎಂದು ಮುಜರಾಯಿ(ದೇವಸ್ವಂ) ಸಚಿವರು ತಿಳಿಸಿದರು. ಶಶಿಕಲಾರ ಸವಾಲುಗಳನ್ನು ಸ್ವೀಕರಿಸಿದ್ದೇನೆ ಎಂದ ಸಚಿವರು ಅವರ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡುವುದಾಗಿ ತಿಳಿಸಿದರು.
ಇಂತಹ ಕೋಮುವಾದಿ ಪ್ರಚಾರ ನಡೆಸುವವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳುವುದು ಎಂದು ಕಡಕಂಪ್ಪಳ್ಳಿ ಸುರೇಂದ್ರನ್ ಕೇರಳ ವಿಧಾನಸಭೆಗೆ ತಿಳಿಸಿದರು. ಶಾಸಕ ರಾಜು ಎಬ್ರಾಹಾಂ ಕೇಳಿದ ಶಬರಿಮಲೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುವ ವೇಳೆ ಶಶಿಕಲಾ ವಿರುದ್ಧ ಕೋರ್ಟಿಗೆ ಹೋಗುವ ವಿಚಾರವನ್ನು ಸಚಿವರು ತಿಳಿಸಿದ್ದಾರೆ.