ಸಿಐಸಿಯನ್ನು ಕೇಂದ್ರ ಸರಕಾರದ ಹಸ್ತಕ್ಷೇಪದಿಂದ ಮುಕ್ತವಾಗಿಡಿ: ಮಾಜಿ ಮುಖ್ಯ ಆಯುಕ್ತರಿಂದ ರಾಷ್ಟ್ರಪತಿಗೆ ಮನವಿ
ಹೊಸದಿಲ್ಲಿ,ಡಿ.10: ಸೋಮವಾರ ರಾಷ್ಟ್ರಪತಿಗೆ ಪತ್ರ ಬರೆದಿರುವ ಮಾಜಿ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯುಲು, ನೂತನ ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರಿಗೆ, ಅವಧಿ, ಸ್ಥಾನ ಮತ್ತು ವೇತನದ ವಿಷಯದಲ್ಲಿ ಮಾಹಿತಿ ಹಕ್ಕು ಕಾಯ್ದೆ ನೀಡಿರುವ ಸ್ವಾತಂತ್ರ್ಯವಿರುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಸಿಐಸಿ ಮತ್ತು ಮಾಹಿತಿ ಆಯುಕ್ತರ ಅವಧಿ, ಸ್ಥಾನ ಮತ್ತು ವೇತನವು ಪ್ರಸ್ತುತ ಸರಕಾರವು ಪ್ರಸ್ತಾವಿಸಿರುವ ಆರ್ಟಿಐ ಕಾಯ್ದೆಗೆ ತಿದ್ದುಪಡಿಯಲ್ಲಿ ತಿಳಿಸಿರುವಂತೆ ಕೇಂದ್ರ ಸರಕಾರ ಸೂಚಿಸಿದಂತೆ ಇರಬಾರದು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ಗೆ ಬರೆದ ಪತ್ರದಲ್ಲಿ ಆಚಾರ್ಯುಲು ತಿಳಿಸಿದ್ದಾರೆ. ಸದ್ಯ ಆರ್ಟಿಐ ಕಾಯ್ದೆಯ ಪ್ರಕಾರ, ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರ ಸೇವಾ ಅವಧಿಯು ಐದು ವರ್ಷ ಅಥವಾ ಅವರ ವಯಸ್ಸು 65 ವರ್ಷ (ಯಾವುದು ಮೊದಲು ಆಗುತ್ತದೋ ಅದು) ಆಗುವವರೆಗೆ ಆಗಿರುತ್ತದೆ. ಸರಕಾರ ನೇಮಕ ಮಾಡಲಿರುವ ಮುಂದಿನ ಮುಖ್ಯ ಮಾಹಿತಿ ಆಯುಕ್ತ ಆಡಳಿತ ಕ್ಷೇತ್ರದಿಂದ ಬಂದವರಲ್ಲ ಎಂಬುದನ್ನು ಖಚಿತಪಡಿಸುವಂತೆಯೂ ಆಚಾರ್ಯುಲು ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.
ಆರ್ಟಿಐ ಕಾಯ್ದೆಯ ಸೆಕ್ಷನ್ 12(5) ಪ್ರಸ್ತಾಪಿಸಿದ ಅವರು, ಈ ವಿಧಿಯ ಪ್ರಕಾರ, ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ಪ್ರಬಂಧನೆ, ಪತ್ರಿಕೋದ್ಯಮ, ಸಮೂಹ ಮಾಧ್ಯಮ ಅಥವಾ ಆಡಳಿತದಲ್ಲಿ ಅನುಭವ ಹೊಂದಿರುವವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಹದಿಮೂರು ವರ್ಷಗಳಿಂದ ಕೇವಲ ಆಡಳಿತ ಕ್ಷೇತ್ರದಿಂದಲೇ ಮುಖ್ಯ ಮಾಹಿತಿ ಆಯುಕ್ತರನ್ನು ಆಯ್ಕೆ ಮಾಡಲಾಗುತ್ತಿದೆ. ಹಾಗಾಗಿ ಈ ಬಾರಿಯಾದರೂ ವಿಭಿನ್ನ ಕ್ಷೇತ್ರದ ಪರಿಣತರನ್ನು ಈ ಸ್ಥಾನಕ್ಕೆ ನೇಮಕ ಮಾಡುವಂತೆ ಆಚಾರ್ಯುಲು ರಾಷ್ಟ್ರಪತಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.