ವಿಧಾನಸಭೆಯಲ್ಲಿ ಮಂಡಿಸಿದ ನಿರ್ಣಯದಲ್ಲಿ ರಾಜೀವ್ ಗಾಂಧಿ ಬಗ್ಗೆ ಉಲ್ಲೇಖವೇ ಇಲ್ಲ: ಆಪ್ ಸ್ಪಷ್ಟನೆ
“ಅಲ್ಕಾ ಲಂಬಾರಿಂದ ರಾಜೀನಾಮೆಯನ್ನೂ ಕೇಳಿಲ್ಲ”
ಹೊಸದಿಲ್ಲಿ, ಡಿ.22: ಶುಕ್ರವಾರ ದಿಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾದ ನಿರ್ಣಯದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಭಾರತ ರತ್ನವನ್ನು ಹಿಂಪಡೆಯಬೇಕು ಎನ್ನುವ ಬೇಡಿಕೆಯಿರಲಿಲ್ಲ ಎಂದು ಆಮ್ ಆದ್ಮಿ ಪಕ್ಷ ಸ್ಪಷ್ಟಪಡಿಸಿದೆ. 1984ರ ಸಿಖ್ ವಿರೋಧಿ ಗಲಭೆಯನ್ನು ಸಮರ್ಥಿಸಿದ್ದಕ್ಕಾಗಿ ರಾಜೀವ್ ಗಾಂಧಿಯವರಿಗೆ ನೀಡಲಾದ ಭಾರತ ರತ್ನ ಪುರಸ್ಕಾರವನ್ನು ಹಿಂಪಡೆಯಬೇಕು ಎನ್ನುವ ನಿರ್ಣಯವನ್ನು ದಿಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು ಎಂದು ವರದಿಯಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, “ರಾಜೀವ್ ಗಾಂಧಿಯವರಿಗೆ ಭಾರತ ರತ್ನ ನೀಡಿರುವ ವಿಚಾರದಲ್ಲಿ ಆಪ್ ವಿರೋಧ ವ್ಯಕ್ತಪಡಿಸಿಲ್ಲ. ರಾಜೀವ್ ಗಾಂಧಿಯವರಿಗೆ ನೀಡಲಾದ ಭಾರತ ರತ್ನ ಪುರಸ್ಕಾರವನ್ನು ಹಿಂಪಡೆಯಬೇಕು ಎನ್ನುವ ಅಭಿಪ್ರಾಯ ನಮ್ಮದಲ್ಲ. ಯಾರಿಂದಲೂ ನಾವು ರಾಜೀನಾಮೆಯನ್ನು ಕೇಳಿಲ್ಲ. ಇದೆಲ್ಲಾ ವದಂತಿ” ಎಂದವರು ಹೇಳಿದರು.
“ಇಂಗ್ಲಿಷ್ ಮತ್ತು ಹಿಂದಿಯಲ್ಲಿದ್ದ ನಿರ್ಣಯವನ್ನು ವಿತರಿಸಲಾಗಿತ್ತು. ಜರ್ನೈಲ್ ಸಿಂಗ್ ಈ ನಿರ್ಣಯವನ್ನು ಓದಿದ್ದರು. ವಿತರಿಸಲ್ಪಟ್ಟ ನಿರ್ಣಯದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಬಗ್ಗೆ ಒಂದು ವಾಕ್ಯವೂ ಇರಲಿಲ್ಲ” ಎಂದು ಆಪ್ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ.