ಗೋವಾ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಘರ್ಷಣೆ
ಹೊಸದಿಲ್ಲಿ, ಡಿ. 22: ರಫೇಲ್ ಒಪ್ಪಂದವನ್ನು ಕಾಂಗ್ರೆಸ್ ನಾಯಕತ್ವ ಪ್ರಶ್ನಿಸಿರುವುದನ್ನು ಟೀಕಿಸಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಪ್ರತಿಭಟನ ರ್ಯಾಲಿ ಬಳಿಕ ಶುಕ್ರವಾರ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.
ಪ್ರತಿಭಟನೆ ರಾಜ್ಯ ಕಾಂಗ್ರೆಸ್ ಕೇಂದ್ರದ ಸಮೀಪ ಅಂತ್ಯಗೊಂಡ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು.
ಯಾವುದೇ ಘರ್ಷಣೆ ಸಂಭವಿಸಿಲ್ಲ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. 10-12 ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದರು. ನಮ್ಮನ್ನು ನಿಂದಿಸಿದರು. ನಮ್ಮೊಂದಿಗಿದ್ದ ಮಹಿಳೆಯರಿಗೆ ಕಿರುಕುಳ ನೀಡಿದರು. ಅವರು ನಮ್ಮ ಮೇಲೆ ದಾಳಿ ನಡೆಸಿದರು. ಧ್ವಜಗಳನ್ನು ಧ್ವಂಸಗೊಳಿಸಿದರು. ಈ ಘರ್ಷಣೆಗೆ ಕಾಂಗ್ರೆಸ್ ಪಕ್ಷ ಉತ್ತೇಜಿಸಿತು ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ವಿನಯ್ ತೆಂಡೂಲ್ಕರ್ ತಿಳಿಸಿದರು.
ತನ್ನನ್ನು ಬಿಜೆಪಿ ಕಾರ್ಯಕರ್ತರು ನಿಂದಿಸಿದರು ಎಂದು ಗೋವಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಮಾ ಕುಟಿನ್ಹೊ ಹೇಳಿದ್ದಾರೆ.
“ನನಗೆ ಬಿಜೆಪಿಯ ಕಾರ್ಯಕರ್ತರು ನಿಂದಿಸಿದರು. ಕೆಟ್ಟ ವಿಚಾರವೆಂದರೆ ಪೊಲೀಸರು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ನಾವು 15ರಿಂದ 20 ಜನರಿದ್ದರು. ಬಿಜೆಪಿ ಗುಂಪು ನಮ್ಮ ಮೇಲೆ ದಾಳಿ ನಡೆಸಿತು. ನಾವು ಈ ದಾಳಿ ಖಂಡಿಸುತ್ತೇವೆ” ಎಂದವರು ಹೇಳಿದರು.
ಘರ್ಷಣೆಯ ಸಂದರ್ಭ ತಮ್ಮ ಕಾರ್ಯಕರ್ತರಿಗೆ ಬಿಜೆಪಿ ಕಾರ್ಯಕರ್ತರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕುಟಿನ್ಹೊ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಕಾರ್ಯಕರ್ತರಿಗೆ ಕಿರುಕುಳ ನೀಡಲಾಗಿದೆ ಹಾಗೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತೆ ಕವಿತಾ ಕಂಡೋಲ್ಕರ್ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ.