ದಿಲ್ಲಿ, ಉ.ಪ್ರದೇಶದ ಹಲವೆಡೆ ಎನ್ ಐಎ ದಾಳಿ: ಐವರ ಬಂಧನ
ಐಸಿಸ್ ಜೊತೆ ನಂಟು ಆರೋಪ
ಹೊಸದಿಲ್ಲಿ,ಡಿ.26: ದೇಶಾದ್ಯಂತ ನಡೆಯಬಹುದಾಗಿದ್ದ ಉಗ್ರರ ದಾಳಿಯ ಸಂಚನ್ನು ಬುಧವಾರ ವಿಫಲಗೊಳಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹತ್ತು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಈ ಸಂಘಟನೆ ಮೇಲೆ ಎನ್ಐಎ ಹಲವು ಸಮಯದಿಂದ ನಿಗಾಯಿಟ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಮೀರತ್, ಲಕ್ನೊ, ಹಪುರ್,ಅಮ್ರೋಹ ಮತ್ತು ಸೀಲಂಪುರ್ ಮುಂತಾದೆಡೆ ಹದಿನೇಳು ಕಡೆಗಳಲ್ಲಿ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೆ ಬಂಧಿತರಿಂದ ರಾಕೆಟ್ ಲಾಂಚರ್, ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರು ದೇಶಾದ್ಯಂತ ಸರಣಿ ಸ್ಪೋಟಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದರು ಎಂದು ತಿಳಿಸಿರುವ ಎನ್ಐಎ ಐಜಿ ಅಲೋಕ್ ಮಿತ್ತಲ್, ಅಮ್ರೋಹ್ ಮಸೀದಿಯ ಮೌಲ್ವಿಯಾಗಿರುವ ಮುಫ್ತಿ ಸೊಹಲಿ ಈ ಉಗ್ರ ಪಡೆಯ ಮುಖ್ಯಸ್ಥನಾಗಿದ್ದ ಎಂದು ತಿಳಿಸಿದ್ದಾರೆ.
ಈ ಸಂಘಟನೆಗೆ ಆದೇಶಗಳು ವಿದೇಶದಿಂದ ಬರುತ್ತಿತ್ತು. ರಾಜಕೀಯ ನಾಯಕರು ಸೇರಿದಂತೆ ದೇಶದ ಪ್ರತಿಷ್ಠಿತ ವ್ಯಕ್ತಿಗಳು ಮತ್ತು ಸ್ಥಳಗಳ ಮೇಲೆ ದಾಳಿ ನಡೆಸಲು ಇವರು ಸಂಚು ರೂಪಿಸಿದ್ದರು. ಅವರು ರಿಮೋಟ್ ಕಂಟ್ರೋಲ್ ಬಾಂಬ್ಗಳು ಮತ್ತು ಫಿದಾಯೆ ದಾಳಿಗಳನ್ನು ನಡೆಸಲು ಯೋಜನೆ ರೂಪಿಸಿದ್ದರು. ಅವರು ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ತಯಾರಿಸಲೂ ಪ್ರಯತ್ನಿಸಿದ್ದರು ಎಂದು ಮಿತ್ತಲ್ ತಿಳಿಸಿದ್ದಾರೆ.