ಲೋಕಸಭಾ ಚುನಾವಣೆ ಹಿನ್ನೆಲೆ: ರೈತರಿಗೆ ಬಂಪರ್?
ಹೊಸದಿಲ್ಲಿ, ಡಿ.28: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೈತರನ್ನು ಓಲೈಸಲು ಸಜ್ಜಾಗಿರುವ ಕೇಂದ್ರ ಸರ್ಕಾರ, ರೈತರಿಗೆ ಪರಿಹಾರ ಒದಗಿಸುವ ಮೆಗಾ ಪ್ಲಾನ್ ಸಿದ್ಧಪಡಿಸುತ್ತಿದೆ. ತೆಲಂಗಾಣ ಮಾದರಿಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ನೇರ ನಗದು ವರ್ಗಾವಣೆಯಡಿ ಪರಿಹಾರ ಒದಗಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.
ಹಲವು ಸುತ್ತುಗಳ ಚರ್ಚೆ ಬಳಿಕ, ಸಣ್ಣ ಹಾಗೂ ಅತಿಸಣ್ಣ ರೈತರು ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕಾರ್ಮಿಕರಿಗೆ ಮಾಡುವ ವೆಚ್ಚಕ್ಕೆ ಅನುಕೂಲವಾಗುವಂತೆ ಸೀಮಿತ ನೇರ ಪ್ರಯೋಜನ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಸರ್ಕಾರದಲ್ಲಿ ವಿವಿಧ ಹಂತಗಳಲ್ಲಿ ಒಲವು ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಈ ಯೋಜನೆಗೆ ಸುಮಾರು 1.25 ಲಕ್ಷ ಕೋಟಿ ರೂಪಾಯಿ ವೆಚ್ಚ ತಗುಲುವ ನಿರೀಕ್ಷೆ ಇದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ವೆಚ್ಚ ಭರಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಈ ಚರ್ಚೆಯಲ್ಲಿ ಭಾಗವಹಿಸಿದ ಕೆಲ ಅಧಿಕಾರಿಗಳ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರ 70:30 ಅನುಪಾತದಲ್ಲಿ ಈ ಹೊರೆಯನ್ನು ಹಂಚಿಕೊಳ್ಳಲಿವೆ.
"ಇದು ರಾಜಕೀಯ ನಿರ್ಧಾರವಾಗಲಿದೆ. ವೆಚ್ಚ ಮತ್ತು ಲೋಕಸಭೆ ಚುನಾವಣೆಗೆ ಮುನ್ನ ಸೀಮಿತ ಅವಧಿ ಇರುವುದು ಸವಾಲಿನ ಕೆಲಸ. ಆದರೆ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇರುವುದು ಇದಕ್ಕೆ ಪೂರಕವಾಗಲಿದೆ. ಕಾಂಗ್ರೆಸ್ ಆಡಳಿತದ ಸರ್ಕಾರಗಳು ಕೂಡಾ ರೈತರ ಸಂಕಷ್ಟಗಳನ್ನು ಬಗೆಹರಿಸಲು ತುದಿಗಾಲಲ್ಲಿ ನಿಂತಿವೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಈ ಕುರಿತಂತೆ ಹಣಕಾಸು ನಿರ್ಧಾರ ಇನ್ನೂ ಅಂತಿಮವಾಗಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.