ಸರಕಾರ ಕುರ್ಆನ್ ನಲ್ಲಿರುವ ವಿಚ್ಛೇದನದ ನಿಯಮಗಳನ್ನು ಜಾರಿಗೊಳಿಸಬೇಕು : ಸಂಸದೆ ರಂಜೀತಾ ರಂಜನ್
“ವಿಚ್ಛೇದನ ಕುರಿತು ಅತ್ಯುತ್ತಮ ಮಾರ್ಗಸೂಚಿಗಳನ್ನು ಹೊಂದಿರುವ ಕುರ್ಆನ್ ಬಗ್ಗೆ ನನಗೆ ಹೆಮ್ಮೆಯಿದೆ”
ಹೊಸದಿಲ್ಲಿ,ಡಿ.28: ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮೇಲಿನ ಚರ್ಚೆ ಸಂದರ್ಭದಲ್ಲಿ ಬಿಹಾರದ ಸುಪೌಲ್ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ರಂಜೀತಾ ರಂಜನ್ ಅವರು ಅದನ್ನು ಬಲವಾಗಿ ವಿರೋಧಿಸಿದ್ದು ಮಾತ್ರವಲ್ಲ,ಈ ಮಸೂದೆಯಿಂದಾಗಿಯೇ ತಾನು ಕುರ್ಆನ್ ಮತ್ತು ವಿಚ್ಛೇದನ ಕುರಿತು ಅದರ ಬೋಧನೆಗಳನ್ನು ಓದುವಂತಾಯಿತು ಹಾಗೂ ಅದರ ವಿಚ್ಛೇದನ ನಿಯಮಗಳು ಜಗತ್ತಿನಲ್ಲಿಯೇ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯುತ್ತಮವಾಗಿವೆ ಎನ್ನುವುದನ್ನು ಕಂಡುಕೊಂಡಿದ್ದೇನೆ ಎಂದೂ ಹೇಳಿದರು.
ಈ ಮಸೂದೆಯಿಂದಾಗಿ ತಾನು ಕುರ್ಆನ್ನಲ್ಲಿಯ ವಿಚ್ಛೇದನ ನಿಯಮಗಳನ್ನು ವಿವರವಾಗಿ ಓದಿಕೊಳ್ಳಲು ಸಾಧ್ಯವಾಯಿತು,ಅದಕ್ಕಾಗಿ ತಾನು ನಿಮಗೆ ಆಭಾರಿಯಾಗಿದ್ದೇನೆ. ಸೂರ ನಿಸಾ ಹಾಗು ಸೂರ (ಅಲ್ ) ಬಕರದಲ್ಲಿ ವಿಚ್ಛೇದನ ಕುರಿತ ವಚನಗಳನ್ನು ನಾನು ವಿವರವಾಗಿ ಓದಿದ್ದೇನೆ. ಕುರ್ ಆನ್ ನಲ್ಲಿ ವಿಚ್ಛೇದನಕ್ಕಾಗಿ ಅತ್ಯುತ್ತಮ ನಿಯಮಗಳಿವೆ. ಈ ಮಸೂದೆಯನ್ನು ಅಂಗೀಕರಿಸಿದರೆ ಮುಸ್ಲಿಂ ಮಹಿಳೆಯರು ನಿಮಗೆ ಮತ ಹಾಕುತ್ತಾರೆ ಎಂಬ ಭ್ರಮೆಯಲ್ಲಿ ನೀವಿದ್ದೀರಿ. ಈ ಮಸೂದೆಯಲ್ಲಿ ಮಹಿಳೆಯರ ಹಿತಾಸಕ್ತಿಯನ್ನು ರಕ್ಷಿಸುವ ಒಂದಾದರೂ ನಿಯಮವನ್ನು ನೀವು ತೋರಿಸಿ ಎಂದು ಸವಾಲು ಹಾಕಿದ ರಂಜನ್, ಕುರ್ಆನ್ ಬಗ್ಗೆ ತನಗೆ ಹೆಮ್ಮೆಯಿದೆ. ಅದು ಪುರುಷರಂತೆ ಮಹಿಳೆಯರಿಗೂ ವಿಚ್ಛೇದನದ ಸಮಾನ ಹಕ್ಕುಗಳನ್ನು ನೀಡಿದೆ. ಇಬ್ಬರು ವ್ಯಕ್ತಿಗಳು ಮತ್ತು ಎರಡು ಕುಟುಂಬಗಳ ನಡುವಿನ ಸಂಬಂಧಗಳನ್ನು ಹೇಗೆ ಕಾಯ್ದುಕೊಳ್ಳಬೇಕು ಎನ್ನುವುದನ್ನು ಅದು ಹೇಳುತ್ತಿದೆ. ಐದು ಹೆಜ್ಜೆಗಳ ಮೂಲಕ ವಿಚ್ಛೇದನವನ್ನು ತಡೆಯಲು ಅದು ಪ್ರಯತ್ನಿಸಿದೆ. ವಿಚ್ಛೇದನಕ್ಕೆ ಕುರ್ಆನ್ನಲ್ಲಿರುವುದಕ್ಕಿಂತ ಪ್ರಬಲವಾದ ಕಾನೂನು ಇರಲು ಸಾಧ್ಯವಿಲ್ಲ ಎಂದು ಹೇಳಿದರು.
ತ್ರಿವಳಿ ತಲಾಕ್ನ್ನು ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ ಬಳಿಕವೂ ತ್ರಿವಳಿ ತಲಾಕ್ನ 477 ಪ್ರಕರಣಗಳು ವರದಿಯಾಗಿವೆ ಎಂದು ಸರಕಾರವು ಹೇಳುತ್ತಿದೆ. ಪ್ರಬಲವಾದ ಕಾನೂನು ಜಾರಿಯಲ್ಲಿದ್ದರೂ ಅದೆಷ್ಟೋ ವರದಕ್ಷಿಣೆ ಸಾವುಗಳು ಸಂಭವಿಸಿವೆ, ಹಿಂದು ಪುರುಷರು ಮೊದಲ ಪತ್ನಿಗೆ ವಿಚ್ಛೇದನವನ್ನೂ ನೀಡದೆ ಎರಡನೇ ಪತ್ನಿಯನ್ನು ಮದುವೆ ಮಾಡಿಕೊಂಡು ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ. ಇವೆಲ್ಲ ವಿಷಯಗಳನ್ನು ನೀವೇಕೆ ಸದನದಲ್ಲಿ ಚರ್ಚಿಸುವುದಿಲ್ಲ? ಮುಸ್ಲಿಮರನ್ನೇ ಏಕೆ ಗುರಿಯಾಗಿಸಿಕೊಳ್ಳುತ್ತಿದ್ದೀರಿ? ಯಾವನೋ ಒಬ್ಬ ತಪ್ಪಾಗಿ ವಿಚ್ಛೇದನ ನೀಡಿದರೆ ಮುಸ್ಲಿಮರನ್ನು ಮಾತ್ರ ಏಕೆ ಗುರಿಯಾಗಿಸಿಕೊಳ್ಳುತ್ತೀರಿ,ಹಿಂದುಗಳನ್ನು ಏಕೆ ಗುರಿಯಾಗಿಸಿಕೊಳ್ಳುವುದಿಲ್ಲ? ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ಗುಂಪು ಹಲ್ಲೆಗಳಲ್ಲಿ ಅದೆಷ್ಟೋ ಜನರು ಕೊಲ್ಲಲ್ಪಟ್ಟಿದ್ದಾರೆ, ಅದನ್ನೇಕೆ ನೀವು ಚರ್ಚಿಸುವುದಿಲ್ಲ? ನಿಮ್ಮದೇ ಸರಕಾರವಿರುವ ಬಿಹಾರದ ಮುಝಫ್ಫರಪುರದಲ್ಲಿ 37 ಬಾಲಕಿಯರು ಅತ್ಯಾಚಾರಕ್ಕೊಳಗಾಗಿದ್ದಾರೆ,ನಿಮ್ಮ ಸಚಿವರೇ ಆರೋಪಿಗಳನ್ನು ಬೆಂಬಲಿಸಿದ್ದರು. ಅದನ್ನೇಕೆ ನೀವು ಚರ್ಚಿಸುವುದಿಲ್ಲ? ಬಲಿಪಶುಗಳು ಹಿಂದು ಬಾಲಕಿಯರು ಎಂಬ ಕಾರಣಕ್ಕಾಗಿಯೇ? ಈ ತ್ರಿವಳಿ ಮಸೂದೆಯ ಮೂಲಕ ಮುಸ್ಲಿಂ ಮತಗಳ ಮೇಲೆ ನೀವು ಕಣ್ಣಿರಿಸಿದ್ದೀರಿ,ಆದರೆ ಈ ಕಾನೂನಿಗಾಗಿ ಮುಸ್ಲಿಂ ಮಹಿಳೆಯರು ನಿಮಗೆ ಮತ ನೀಡುತ್ತಾರೆ ಎಂಬ ಭ್ರಮೆ ಬೇಡ ಎಂದರು.
ಈ ಮುಸ್ಲಿಂ ಮಹಿಳೆಯರ(ವೈವಾಹಿಕ ಹಕ್ಕುಗಳ ರಕ್ಷಣೆ) ಕಾಯ್ದೆಯ ಮೂಲಕ ಮುಸ್ಲಿಂ ಮಹಿಳೆಯರನ್ನು ನೀವು ಹೇಗೆ ರಕ್ಷಿಸುತ್ತೀರಿ ಎನ್ನುವುದನ್ನು ಹೇಳಿ. ಪುರುಷನೋರ್ವ ಜೈಲಿಗೆ ಹೋದಾಗ ಮತ್ತು ತನ್ನ ಉದ್ಯೋಗವನ್ನು ಕಳೆದುಕೊಂಡಾಗ ಹೇಗೆ ಆತ ಮಹಿಳೆಗೆ ಆಧಾರವಾಗಿರುತ್ತಾನೆ? ಮಹಿಳೆಯರಿಗೆ ಯಾವ ರಕ್ಷಣೆಯನ್ನು ನೀವು ನೀಡುತ್ತೀರಿ? ನೀವು ಅವರನ್ನು ಮುಸ್ಲಿಂ ವೈಯಕ್ತಿಕ ಕಾನೂನು,ಅವರ ಧರ್ಮ ಮತ್ತು ಮನೆಗಳಿಂದ ದೂರ ಮಾಡುತ್ತಿದ್ದೀರಿ. ಇದು ಬಿರುಕನ್ನು ಸೃಷ್ಟಿಸುತ್ತದೆ. ನೀವು ತಪ್ಪು ಉದ್ದೇಶವನ್ನು ಹೊಂದಿದ್ದಿರಿ ಎಂದು ರಂಜನ್ ಕಿಡಿಕಾರಿದರು.
’ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನವನ್ನು ನಿಯಂತ್ರಿಸಲು ಕಾನೂನನ್ನು ತರಲೇಬೇಕೆಂದು ಸರಕಾರವು ಬಯಸಿದ್ದರೆ ಅದು ಕುರ್ಆನ್ನಲ್ಲಿಯ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಏಕೆಂದರೆ ಅವು ಅತ್ಯುತ್ತಮವಾಗಿವೆ ಮತ್ತು ಮುಸ್ಲಿಂ ಸಮುದಾಯವೂ ಅವುಗಳನ್ನು ಒಪ್ಪಿಕೊಳ್ಳುತ್ತದೆ. ನೀವು ಮುಸ್ಲಿಂ ಮಹಿಳೆಯರ ವಿಷಯದಲ್ಲಿ ಆಟವಾಡುತ್ತಿದ್ದೀರಿ ಅಷ್ಟೇ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೌಟುಂಬಿಕ ವಿಷಯಗಳ ಕುರಿತು ಹಿಂದು-ಮುಸ್ಲಿಂ ಎಂಬ ಭೇದಭಾವ ಸಲ್ಲದು ಎಂದು ಅವರು ಹೇಳಿದರು.