ವಜಾ ಪ್ರಶ್ನಿಸಿದ್ದ ಅಂಗನವಾಡಿ ಕಾರ್ಯಕರ್ತೆಗೆ ಒಂದು ವಾರ ಜೈಲು ಶಿಕ್ಷೆ
ಚೆನ್ನೈ, ಜ. 1: ತನ್ನನ್ನು ಸೇವೆಯಿಂದ ವಜಾಗೊಳಿಸಿದ ನಿರ್ಧಾರದ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ಚೆನ್ನೈ ಹೈಕೋರ್ಟ್ನ ಮಧುರೈ ಪೀಠ ಒಂದು ವಾರದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪುದುಕೊಟ್ಟೈ ಜಿಲ್ಲೆಯ ನಿಲಯೂರು ಎಂಬ ಹಳ್ಳಿಯ ಎಸ್.ಮಂಗಳಂ ಶಿಕ್ಷೆಗೆ ಒಳಗಾಗಿರುವ ಮಹಿಳೆ. ಜೈಲು ಶಿಕ್ಷೆಯ ಜತೆಗೆ ಮಹಿಳೆಯ ಪಾಸ್ಪೋರ್ಟ್ ಹಾಗೂ ಪಡಿತರ ಚೀಟಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದ್ದು, ಬೇರೆಯವರ ಪಾಸ್ಪೋರ್ಟ್ ಬಳಸಿ ಆಕೆ ವಿದೇಶಿ ಪ್ರವಾಸ ಕೈಗೊಂಡಿದ್ದಾಳೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆಯೂ ಸೂಚಿಸಿದೆ.
ಮಂಗಳಂ 1999ರ ಜೂನ್ನಲ್ಲಿ ಅರೆಕಾಲಿಕ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡಿದ್ದರು. ಅದೇ ವರ್ಷದ ನವೆಂಬರ್ 11ರಂದು ಸಮಾಜ ಕಲ್ಯಾಣ ಇಲಾಖೆ ಆಕೆಯನ್ನು ವಜಾ ಮಾಡಿತ್ತು. ನೇಮಕಗೊಂಡ ನಾಲ್ಕು ದಿನಗಳ ಬಳಿಕ ಅಂದರೆ ಜೂನ್ 28ರಿಂದ ಆಕೆ ಕರ್ತವ್ಯಕ್ಕೆ ಹಾಜರಾಗದೇ, ಮೇಲಧಿಕಾರಿಗಳ ಅನುಮತಿಯನ್ನೂ ಪಡೆಯದೇ ಸಿಂಗಾಪುರ ಪ್ರವಾಸ ಕೈಗೊಂಡಿದ್ದರು ಎನ್ನುವುದು ಆಕೆಯ ಮೇಲಿನ ಆರೋಪ. ತನ್ನ ನಿಕಟ ಸಂಬಂಧಿಯ ಪಾಸ್ಪೋರ್ಟ್ ಬಳಸಿ ಪ್ರವಾಸ ಕೈಗೊಂಡಿದ್ದರು ಎಂದೂ ಆಪಾದಿಸಲಾಗಿತ್ತು.
ಪ್ರಕರಣದ ವಿವರ ತಿಳಿದ ಬಳಿಕ ಆಕೆಯ ವಕೀಲ, ವಕಾಲತ್ ವಾಪಾಸು ಪಡೆದಿದ್ದರು. ಅಪಾಯದ ಮುನ್ಸೂಚನೆ ಅರಿತ ಮಂಗಳಂ ಪ್ರಕರಣ ವಾಪಾಸು ಪಡೆಯಲು ಪ್ರಯತ್ನಿಸಿದರು. ಆದರೆ ನ್ಯಾಯಮೂರ್ತಿ ಎಸ್.ವೈದ್ಯನಾಥನ್ ಅದಕ್ಕೆ ಅವಕಾಶ ನೀಡಲಿಲ್ಲ. ನ್ಯಾಯಾಲಯವನ್ನು ದಾರಿತಪ್ಪಿಸಲು ಹೊರಟ ಈ ಪ್ರಕರಣಕ್ಕೆ ಕನಿಷ್ಠ ಎರಡು ತಿಂಗಳ ಶಿಕ್ಷೆ ವಿಧಿಸಬೇಕು. ಆದರೆ ಮಹಿಳೆ ಎಂಬ ಕಾರಣಕ್ಕೆ ಒಂದು ವಾರದ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ತೀರ್ಪು ನೀಡಿದ್ದಾರೆ.
ಪಾಸ್ಪೋರ್ಟ್ ಪ್ರಾಧಿಕಾರ ಕೂಡಾ ಆಕೆಯ ಪಾಸ್ಪೋರ್ಟ್ ರದ್ದುಪಡಿಸಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ. ನಕಲಿ ಪಾಸ್ಪೋರ್ಟ್ನಲ್ಲಿ ವಿದೇಶ ಪ್ರವಾಸ ಕೈಗೊಂಡ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.