ರಾಮಮಂದಿರ ಅಧ್ಯಾದೇಶಕ್ಕೆ ಕೇಂದ್ರ ಸಚಿವ ಪಾಸ್ವಾನ್ ವಿರೋಧ
ಹೊಸದಿಲ್ಲಿ, ಜ.3: ಅಯೋಧ್ಯೆ ರಾಮಮಂದಿರದ ಕುರಿತಾಗಿ ಸುಗ್ರೀವಾಜ್ಞೆ ಹೊರಡಿಸುವುದನ್ನು ಬಿಜೆಪಿಯ ಮಿತ್ರಪಕ್ಷ ಎಲ್ಜೆಪಿಯ ವರಿಷ್ಠ ಹಾಗೂ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ವಿರೋಧಿಸಿದ್ದಾರೆ. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡುವ ತೀರ್ಪು ಅಂತಿಮವಾಗಿರಬೇಕೆಂದು ಅವರು ಪ್ರತಿಪಾದಿಸಿದ್ದಾರೆ.
ರಾಮದೇಗುಲಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಯಾವುದೇ ತೀರ್ಪನ್ನು ನೀಡಲಿ, ಹಿಂದುವಾಗಿರಲಿ, ಮುಸ್ಲಿಮನಾಗಿರಲಿ ಅಥವಾ ಇನ್ನಾವುದೇ ಸಮುದಾಯವರಾಗಲಿರಲಿ ಅದನ್ನು ಪ್ರತಿಯೊಬ್ಬರೂ ಸ್ವೀಕರಿಸಬೇಕು. ಈ ವಿಷಯದಲ್ಲಿ ನಮ್ಮ ನಿಲುವು ಸ್ಥಿರವಾಗಿದೆ. ಸುಪ್ರೀಂಕೋರ್ಟ್ ತೀರ್ಪಿಗಾಗಿ ನಾವು ಕಾಯುತ್ತೇವೆ ಎಂದು ಪ್ರಧಾನಿಯವರೇ ಹೇಳಿರುವಾಗ, ರಾಮಂದಿರ ವಿಷಯದಲ್ಲಿ ಆದರೆ, ಹೋದರೆ ಎಂಬ ಮಾತುಗಳೆಲ್ಲಾ ಕೊನೆಗೊಳ್ಳಬೇಕೆಂದು ಅವರು ಹೇಳಿದ್ದಾರೆಂದು ಲೋಕಜನಶಕ್ತಿ ಪಕ್ಷದ ಅಧ್ಯಕ್ಷರಾದ ಪಾಸ್ವಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿದಲ್ಲಿ, ಅದನ್ನು ತಾವು ಒಪ್ಪಿಕೊಳ್ಳುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪಾಸ್ವಾನ್, ಈ ವಿಷಯದಲ್ಲಿ ತನ್ನ ಪಕ್ಷದ ನಿಲುವು ಸ್ಥಿರವಾಗಿದ್ದು, ಸುಗ್ರೀವಾಜ್ಞೆಯನ್ನು ತಾನು ಬೆಂಬಲಿಸುವುದಿಲ್ಲವೆಂದು ಹೇಳಿದ್ದಾರೆ. ಅಯೋಧ್ಯೆ ರಾಮಮಂದಿರ ವಿವಾದದ ಕುರಿತ ನ್ಯಾಯಾಂಗ ಪ್ರಕ್ರಿಯೆಯ ಮುಗಿಯುವರೆಗೆ ತನ್ನ ಸರಕಾರವು ಆ ವಿಷಯವಾಗಿ ಯಾವುದೇ ನಿರ್ಧಾರವನ್ನು ಕೈಗೊಳ್ಳುವುದಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದರು.