ಮೀಸಲಾತಿಯಿಲ್ಲದೆ ಆಕೆ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ: ಇಂದಿರಾ ಗಾಂಧಿಯನ್ನು ಹಾಡಿಹೊಗಳಿದ ಗಡ್ಕರಿ
ಹೊಸದಿಲ್ಲಿ, ಜ.7: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹೊಗಳಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಕೆಗೆ ತನ್ನ ಸಾಮರ್ಥ್ಯ ಸಾಬೀತು ಪಡಿಸಲು ಮೀಸಲಾತಿ ಅಗತ್ಯವಿರಲಿಲ್ಲ ಹಾಗೂ ಆಕೆ ಕಾಂಗ್ರೆಸ್ ಪಕ್ಷದಲ್ಲಿನ ಇತರ ಪುರುಷ ನಾಯಕರುಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದಿದ್ದಾರೆ.
ಮಹಿಳಾ ಸ್ವಸಹಾಯ ಗುಂಪುಗಳು ಆಯೋಜಿಸಿದ್ದ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ ``ಇಂದಿರಾ ಗಾಂಧಿ ಸಾಧನೆ ಮೀಸಲಾತಿಯಿಂದಾಗಿಯೇ?'' ಎಂದು ಪ್ರಶ್ನಿಸಿದ್ದಾರೆ.
``ನಾನು ಮಹಿಳಾ ಮೀಸಲಾತಿಯ ವಿರುದ್ಧವಲ್ಲದೇ ಇದ್ದರೂ ಜಾತಿ ಮತ್ತು ಧರ್ಮಾಧಾರಿತ ರಾಜಕಾರಣಕ್ಕೆ ವಿರುದ್ಧವಾಗಿದ್ದೇನೆ,'' ಎಂದು ಗಡ್ಕರಿ ಹೇಳಿದರು. ``ಬಿಜೆಪಿಯಲ್ಲಿನ ನಾಯಕಿಯರಾದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಮಾಜಿ ರಾಜಸ್ಥಾನ ಸಿಎಂ ವಸುಂಧರಾ ರಾಜೇ ಹಾಗೂ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಕೂಡ ಮೀಸಲಾತಿಯಿಲ್ಲದೆಯೇ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ,'' ಎಂದು ಗಡ್ಕರಿ ಹೇಳಿದರು.``ಒಬ್ಬ ವ್ಯಕ್ತಿ ತನ್ನ ಜ್ಞಾನದಿಂದ ಜೀವನದಲ್ಲಿ ಸಾಧನೆಗೈಯ್ಯುತ್ತಾನೆಯೇ ಹೊರತು ತನ್ನ ಭಾಷೆ, ಧರ್ಮ, ಜಾತಿ ಹಾಗೂ ಪ್ರಾಂತ್ಯದಿಂದಲ್ಲ. ನಾವು ಸಾಯಿಬಾಬಾ, ಗಜಾನನ ಮಹಾರಾಜ್, ಸಂತ ತುಕ್ಡೋಜಿ ಮಹಾರಾಜ್, ಛತ್ರಪತಿ ಶಿವಾಜಿ, ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಜ್ಯೋತಿಭಾ ಫುಳೆ ಅವರ ಜಾತಿ ಅಥವಾ ಧರ್ಮವನ್ನು ಕೇಳಿದ್ದೇವೆಯೇ?'' ಎಂದು ಗಡ್ಕರಿ ಪ್ರಶ್ನಿಸಿದರು.