ರಾಮ ಮಂದಿರ ನಿರ್ಮಿಸದಿದ್ದರೆ ದ್ರೋಹ ಮಾಡಿದಂತೆ: ಸುಬ್ರಮಣ್ಯನ್ ಸ್ವಾಮಿಯಿಂದ ಬಿಜೆಪಿಗೆ ಎಚ್ಚರಿಕೆ
ಹೊಸದಿಲ್ಲಿ,ಜ.12: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸದಿದ್ದರೆ ಸಾರ್ವಜನಿಕರಿಗೆ ದ್ರೋಹ ಮಾಡಿದಂತೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣ್ಯನ್ ಸ್ವಾಮಿ ತನ್ನ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.
“ನಾವು ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಬೇಕು. ಅದೂ ಚುನಾವಣಾ ನೀತಿ ಸಂಹಿತೆ ಇಷ್ಟರಲ್ಲೇ ಜಾರಿಯಾಗಲಿದ್ದು ಅದಕ್ಕೂ ಮುನ್ನ ನಿರ್ಮಾಣ ಕಾರ್ಯ ಆರಂಭವಾಗಬೇಕು ಎಂದು ನಾನು ನನ್ನ ಪಕ್ಷವನ್ನು ಎಚ್ಚರಿಸುತ್ತಿದ್ದೇನೆ. ರಾಮ ಮಂದಿರ ನಿರ್ಮಿಸದೆ ಇದ್ದರೆ ಅದು ಸಾರ್ವಜನಿಕರಿಗೆ ಮಾಡಿದ ದ್ರೋಹ” ಎಂದು ಸ್ವಾಮಿ ಎಎನ್ಐಗೆ ತಿಳಿಸಿದ್ದಾರೆ.
ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸ್ವಾಮಿ, ಸರ್ವೋಚ್ಚ ನ್ಯಾಯಾಲಯದಿಂದ ತಡೆಯಿರದಿರುವುದರಿಂದ ರಾಮ ಮಂದಿರ ನಿರ್ಮಿಸದೆ ಇರುವಂತೆ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನ್ಯಾಯಾಲಯಯ ಸದ್ಯ ಕೇವಲ ಜಮೀನಿನ ಹಕ್ಕಿನ ವ್ಯಾಜ್ಯವನ್ನು ಆಲಿಸುತ್ತಿದೆ. ಹಾಗಾಗಿ ಸರಕಾರ ಮಂದಿರ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು. ವಿಧಿ 300ಎಯ ಅಡಿಯಲ್ಲಿ ಸರಕಾರವೇ ದೇಶದ ಜಮೀನಿನ ಮಾಲಕತ್ವ ಹೊಂದಿರುತ್ತದೆ. ಸರಕಾರ ಪರಿಹಾರ ನೀಡುವ ಮೂಲಕ ಯಾವುದೇ ಜಮೀನನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಸರಕಾರ ರಾಮ ಮಂದಿರ ನಿರ್ಮಾಣ ಮಾಡಬೇಕು ಮತ್ತು ನ್ಯಾಯಾಲಯ ಆ ಜಮೀನು ಯಾರಿಗೆ ಸೇರಿದ್ದು ಎಂದು ನಿರ್ಧರಿಸಿದ ನಂತರ ಆ ಜಮೀನನ್ನು ಅದರ ಮಾಲಕರಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಸರಕಾರ ಖರೀದಿಸಬಹುದಾಗಿದೆ ಎಂದು ಸ್ವಾಮಿ ಅಭಿಪ್ರಾಯಿಸಿದ್ದಾರೆ.
ನ್ಯಾಯಮೂರ್ತಿ ಯು.ಯು ಲಲಿತ್ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ವಿಚಾರಣೆಯಿಂದ ಹಿಂದೆ ಸರಿದ ಕಾರಣ ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 29ಕ್ಕೆ ನಿಗದಿಪಡಿಸಿದೆ.
ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಪ್ರಕರಣವು ಶ್ರೇಷ್ಠ ನ್ಯಾಯಾಲಯದ ಮುಂದೆ ಕಳೆದ ಎಂಟು ವರ್ಷಗಳಿಂದ ಬಾಕಿಯುಳಿದಿದೆ. ಹಲವು ಪಕ್ಷಗಳು ಮತ್ತು ವಿವಿಧ ಬಲಪಂಥೀಯ ಸಂಘಟನೆಗಳು ಈ ಪ್ರಕರಣದ ಶೀಘ್ರ ಅಥವಾ ದೈನಂದಿನ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡುತ್ತಲೇ ಬಂದಿವೆ.