ಲೋಕಸಭೆ ಚುನಾವಣೆಯಲ್ಲಿ ಮತಪತ್ರ ಬಳಸಿ: ಮಾಯಾವತಿ ಆಗ್ರಹ
ಲಕ್ನೋ, ಜ. 22: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಬದಲಾಗಿ ಮತಪತ್ರಗಳನ್ನು ಬಳಸುವ ತನ್ನ ಆಗ್ರಹವನ್ನು ಬಿಎಸ್ಪಿಯ ಮಾಯಾವತಿ ಅವರು ಮಂಗಳವಾರ ಪುನರುಚ್ಚರಿಸಿದ್ದಾರೆ.
ಇವಿಎಂ ಅನ್ನು ತಿರುಚಲು ಸಾಧ್ಯ ಎಂದು ಈ ಹಿಂದೆ ಮಾಯಾವತಿ ಅವರು ಹೇಳಿದ್ದರು. ಭಾರತದಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಅಮೆರಿಕದ ಸ್ವಘೋಷಿತ ಸೈಬರ್ ತಜ್ಞ ಸೈಯದ್ ಶುಜಾ ಲಂಡನ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಬಳಿಕ ಮಾಯಾವತಿ ಈ ಹೇಳಿಕೆ ನೀಡಿದ್ದಾರೆ. ಇವಿಎಂ ಬಗೆಗೆ ಇತ್ತೀಚೆಗೆ ಶುಜಾ ಬಹಿರಂಗಗೊಳಿಸಿರುವ ವಿಚಾರ ಹೆಚ್ಚು ಕಳವಳಕಾರಿಯಾದುದು. ಇಂತಹ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆಯನ್ನು ಮೂರು ಹಂತಗಳಲ್ಲಿ ಪರಿಶೀಲನೆಗೆ ಒಳಪಡುವ ಮತ ಪತ್ರಗಳಲ್ಲಿ ನಡೆಸುವುದು ಉತ್ತಮ ಎಂದು ಅವರು ಹೇಳಿದರು.
ಬಿಜೆಪಿಯ ಪಿತೂರಿಯನ್ನು ಬಹಿರಂಗಗೊಳಿಸಿರುವುದನ್ನು ಗಮನಿಸುವಂತೆ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯಿಯಾಗಿತ್ತು ಹಾಗೂ 1984ರಿಂದ ಬಹುಮತ ಪಡೆದ ಏಕೈಕ ಪಕ್ಷವಾಗಿ ಹೊರ ಹೊಮ್ಮಿತ್ತು.