ಸಿಪಿಎಂ ಕಚೇರಿಯಲ್ಲಿ ಶೋಧ: ಐಪಿಎಸ್ ಅಧಿಕಾರಿಗೆ ಕೇರಳ ಸಿಎಂ ತರಾಟೆ
ತಿರುವನಂತಪುರ, ಜ. 28: ಆಡಳಿತಾರೂಢ ಸಿಪಿಐ (ಎಂ) ಕಚೇರಿ ಯಲ್ಲಿ ಶೋಧ ನಡೆಸಿದ ಮಹಿಳಾ ಐಪಿಎಸ್ ಅಧಿಕಾರಿಯನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜಕೀಯದಲ್ಲಿರುವವರ ವರ್ಚಸ್ಸಿಗೆ ಮಸಿ ಬಳಿಯುವ ಪ್ರವೃತ್ತಿಯನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ಹೊಂದಿವೆ ಎಂದಿದ್ದಾರೆ.
ಪ್ರಕರಣವೊಂದರ ಕೆಲವು ಆರೋಪಿಗಳನ್ನು ಪತ್ತೆ ಮಾಡಲು ಜನವರಿ 24ರಂದು ಮಧ್ಯರಾತ್ರಿ ಯುವ ಮಹಿಳಾ ಐಪಿಎಸ್ ಅಧಿಕಾರಿ ಚೈತ್ರಾ ತೆರೇಸಾ ಜೋನ್ ಇಲ್ಲಿರುವ ಸಿಪಿಐ (ಎಂ) ಕಚೇರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಎಲ್ಡಿಎಫ್ ಸರಕಾರ ಇಲಾಖಾ ತನಿಖೆಗೆ ಆದೇಶಿಸಿದ ಬಳಿಕ ವಾಗ್ವಾದ ನಡೆಯುತ್ತಿರುವ ನಡುವೆ ಮುಖ್ಯಮಂತ್ರಿ ಅವರು ಈ ಹೇಳಿಕೆ ನೀಡಿದ್ದಾರೆ. ನಗರದಲ್ಲಿರುವ ಪೊಲೀಸ್ ಠಾಣೆಗೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ ಸಿಪಿಐ (ಎಂ)ನ ಯುವ ಘಟಕವಾದ ಡಿವೈಎಫ್ಐನ ಕೆಲವು ನಾಯಕರನ್ನು ಪತ್ತೆ ಮಾಡಲು ಚೈತ್ರಾ ನೇತೃತ್ವದ ಪೊಲೀಸರ ತಂಡ ಸಿಪಿಐ (ಎಂ)ನ ಜಿಲ್ಲಾ ಕಚೇರಿಗೆ ಆಗಮಿಸಿತ್ತು.
ಪಕ್ಷದ ಜಿಲ್ಲಾ ನಾಯಕರು ಸಲ್ಲಿಸಿದ ದೂರಿನ ಆಧಾರದಲ್ಲಿ ಚೈತ್ರಾ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ರಾಜ್ಯ ವಿಧಾನ ಸಭೆಯಲ್ಲಿ ಈ ಪ್ರತಿಪಾದನೆಗೆ ಪ್ರತಿಕ್ರಿಯಿಸಿದ ವಿಜಯನ್, ರಾಜ್ಯದಲ್ಲಿ ಪಕ್ಷದ ಕಚೇರಿಯಲ್ಲಿ ಇಂತಹ ದಾಳಿಗಳನ್ನು ನಡೆಸಲಾಗುವುದಿಲ್ಲ ಎಂದಿದ್ದಾರೆ.