ನಾಗೇಶ್ವರ ರಾವ್ ಅಧಿಕಾರದ ದುರುಪಯೋಗದ ಬಗ್ಗೆ ದೂರು ನೀಡಿದ್ದಕ್ಕೆ ವರ್ಗಾವಣೆ ಶಿಕ್ಷೆ
ಸಿಬಿಐ ಎಸ್ಪಿ ರಾಜಾ ಬಾಲಾಜಿ ಗಂಭೀರ ಆರೋಪ
ಸಿಬಿಐ ಹಂಗಾಮಿ ನಿರ್ದೇಶಕ ಗೌರವಾನ್ವಿತ ವ್ಯಕ್ತಿಯಲ್ಲ ಎಂದ ಅಧಿಕಾರಿ
ಹೊಸದಿಲ್ಲಿ, ಜ.29: ಸಿಬಿಐ ಹಂಗಾಮಿ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರಿಂದ ಇತ್ತೀಚೆಗೆ ವರ್ಗಾಯಿಸಲ್ಪಟ್ಟ ಸಿಬಿಐ ಎಸ್ಪಿ ಟಿ. ರಾಜಾ ಬಾಲಾಜಿ ಅವರು ಸ್ಫೋಟಕ ಮಾಹಿತಿ ಹೊರಗೆಡಹಿದ್ದಾರೆ. ನಾಗೇಶ್ವರ ರಾವ್ ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿದ್ದಾರೆ ಎಂದು ಆರೋಪಿಸಿದ ಅವರು, ತಾವು ಹಿಂದಿನ ಸಿಬಿಐ ನಿರ್ದೇಶಕರ ಬಳಿ ಮಾರ್ಚ್ 2017ರಲ್ಲಿ ರಾವ್ ಅವರ ಕೆಟ್ಟ ನಡವಳಿಕೆಯ ಬಗ್ಗೆ ದೂರಿದ ಕಾರಣ ತನ್ನ ಮೇಲೆ ಪೂರ್ವಾಗ್ರಹದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ.
ದಿಲ್ಲಿಯಲ್ಲಿ ಸಿಬಿಐನ ಭ್ರಷ್ಟಾಚಾರ ನಿಗ್ರಹ ಘಟಕದಿಂದ ಗಾಝಿಯಾಬಾದ್ ನ ಸಿಬಿಐ ಅಕಾಡಮಿಗೆ ತಮ್ಮ ವರ್ಗಾವಣೆಯಾದ ಮರುದಿನ, ಜನವರಿ 22ರಂದು ರಾವ್ ಅವರಿಗೆ ಬರೆದ ಪತ್ರದಲ್ಲಿ ತಮ್ಮ ಅತ್ತೆ ಕ್ಯಾನ್ಸರ್ ನಿಂದ ಬಳಲುತ್ತಿರುವುದರಿಂದ ಹಾಗೂ ದಿಲ್ಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಮಾನವೀಯತೆಯ ನೆಲೆಯಲ್ಲಿ ತನಗೆ ದಿಲ್ಲಿಯಲ್ಲಿ ಹುದ್ದೆ ನೀಡಲಾಗಿತ್ತು ಎಂದು ಬರೆದಿದ್ದಾರೆ. ಇದೇ ಕಾರಣದಿಂದ ಸರಕಾರ ತಮಗೆ ಆಸ್ಪತ್ರೆ ಸಮೀಪದ ಪೂರ್ವ ಕಿದ್ವಾಯಿ ನಗರದಲ್ಲಿನ ಸರಕಾರಿ ಕಾಲನಿಯಲ್ಲಿ ಮನೆಯೊದಗಿಸಿತ್ತು ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.
“ನೀವು ಗೌರವಾನ್ವಿತ ವ್ಯಕ್ತಿಯಲ್ಲ ಎಂದು ನನಗಿಂತ ನಿಮಗೆ ಚೆನ್ನಾಗಿ ಗೊತ್ತು'' ಎಂದೂ ಪತ್ರದಲ್ಲಿ ಬರೆಯಲಾಗಿದೆ. ತಮ್ಮ ವರ್ಗಾವಣೆಯ ವಿರುದ್ಧ ಬಾಲಾಜಿ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿದ್ದು ಅದರಲ್ಲಿ ಸಿಬಿಐ ಹಂಗಾಮಿ ನಿರ್ದೇಶಕರ ವಿರುದ್ಧ ಸಾಕ್ಷ್ಯವಿದೆ ಎಂದು ಹೇಳಲಾಗಿದೆ.
ತಾನು ನಾಗೇಶ್ವರ ರಾವ್ ವಿರುದ್ಧ ಹಿಂದಿನ ಸಿಬಿಐ ನಿರ್ದೇಶಕರಿಗೆ ಮಾರ್ಚ್ 11,2017 ಹಾಗೂ ಮೇ 2, 2017ರಂದು ಪತ್ರ ಬರೆದಿದ್ದಾಗಿ ಬಾಲಾಜಿ ವಿವರಿಸಿದ್ದಾರೆ. ಜನವರಿ 10ರಂದು ಅಲೋಕ್ ವರ್ಮಾ ಪದಚ್ಯುತಗೊಂಡ ನಂತರ ರಾವ್ ನಡೆಸುತ್ತಿರುವ ಸಾಮೂಹಿಕ ವರ್ಗಾವಣೆಗಳ ಬಗ್ಗೆಯೂ ಬಾಲಾಜಿ ಆಕ್ಷೇಪ ಸೂಚಿಸಿದ್ದಾರೆ.
ನಾಗೇಶ್ವರ ರಾವ್ ಅವರು ಈ ಹಿಂದೆ ಸಿಬಿಐನ ಚೆನ್ನೈ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ನಾಗೇಶ್ವರ ರಾವ್ ಅಲ್ಲಿ ಜಂಟಿ ನಿರ್ದೇಶಕರಾಗಿದ್ದರು.