ಸರಕಾರಿ ಆದೇಶ ಉಲ್ಲಂಘನೆ: ಅಲೋಕ್ ವರ್ಮಾ ವಿರುದ್ಧ ಇಲಾಖಾ ಕ್ರಮ ಸಾಧ್ಯತೆ
ಹೊಸದಿಲ್ಲಿ, ಜ. 31: ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣೆ ಹಾಗೂ ಹೋಮ್ ಗಾರ್ಡ್ ವರಿಷ್ಠರಾಗಿ ಅಧಿಕಾರ ಸ್ವೀಕರಿಸಲು ನೀಡಿದ ಸರಕಾರದ ಆದೇಶ ಉಲ್ಲಂಘಿಸಿದ ಉಚ್ಛಾಟಿತ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಇಲಾಖಾ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸರಕಾರದ ನಿರ್ದೇಶನ ಅನುಸರಿಸದೇ ಇರುವುದು ಅಖಿಲ ಭಾರತ ಸೇವಾ ಅಧಿಕಾರಿಗಳ ಸೇವಾ ನಿಯಮದ ಉಲ್ಲಂಘನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುದ್ದೆಯಿಂದ ಉಚ್ಛಾಟಿಸಿದ ದಿನ ಅಗ್ನಿಶಾಮಕ ಸೇವೆ, ನಾಗರಿಕ ರಕ್ಷಣೆ ಹಾಗೂ ಹೋಮಂಗಾರ್ಡ್ನ ಪ್ರಧಾನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವಂತೆ ವರ್ಮಾ ಅವರಿಗೆ ಗೃಹ ಸಚಿವಾಲಯ ನಿರ್ದೇಶಿಸಿತ್ತು. ವರ್ಮಾ ಅವರು ನಿರ್ದೇಶನದಂತೆ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಿಂಚಣಿ ಸೌಲಭ್ಯದ ಅಮಾನತು ಸಹಿತ ಇಲಾಖಾ ಕ್ರಮಗಳನ್ನು ಎದುರಿಸಬೇಕಾಗಬಹುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ವರ್ಮಾ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.
Next Story