ಮುದ್ರಾ ಯೋಜನೆಯಡಿ ಎಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ?: ಈ ಪ್ರಶ್ನೆಗೆ ಸಚಿವಾಲಯದ ಬಳಿ ಉತ್ತರವೇ ಇಲ್ಲ
ಆರ್ ಟಿಐ ಅರ್ಜಿಯಿಂದ ಬಹಿರಂಗ
ಹೊಸದಿಲ್ಲಿ, ಫೆ.3: ಶುಕ್ರವಾರ ಬಜೆಟ್ ಭಾಷಣದಲ್ಲಿ ಹಂಗಾಮಿ ಹಣಕಾಸು ಸಚಿವ ಪಿಯೂಶ್ ಗೋಯೆಲ್ ಅವರು, "ಉದ್ಯೋಗಾಕಾಂಕ್ಷಿಗಳು ಇಂದು ಉದ್ಯೋಗದಾತರಾಗುತ್ತಿದ್ದಾರೆ" ಎಂದು ಪ್ರಧಾನಮಂತ್ರಿ ಮುದ್ರಾ ಯೋಜನೆ ಬಗ್ಗೆ ಉಲ್ಲೇಖಿಸಿದ್ದರು. ಸರ್ಕಾರ ಇದುವರೆಗೆ ಒಟ್ಟು 7.3 ಲಕ್ಷ ಕೋಟಿ ರೂಪಾಯಿ ಮೌಲ್ಯದ 15.56 ಕೋಟಿ ರೂ. ಸಾಲ ನೀಡಿದೆ ಎನ್ನುವುದು ಸರ್ಕಾರದ ಹೇಳಿಕೆ.
ಸಾರ್ವಜನಿಕವಾಗಿ ಲಭ್ಯವಿರುವ ಅಂಕಿ ಅಂಶಗಳು ಇದಕ್ಕೆ ಹೋಲಿಕೆಯಾಗುತ್ತವೆ. ಆದರೆ ವಾಸ್ತವವಾಗಿ ಈ ಯೋಜನೆಯಡಿ ಸೃಷ್ಟಿಯಾಗಿರುವ ಉದ್ಯೋಗ ಎಷ್ಟು?
ಕಿರು, ಸಣ್ಣ ಮತ್ತು ಮಧ್ಯಮ ಉದ್ಯೋಗಗಳ ಸಚಿವಾಲಯಕ್ಕೆ ಎನ್ ಡಿಟಿವಿ ಈ ಬಗ್ಗೆ ಆರ್ಟಿಐ ಸಲ್ಲಿಸಿದ್ದು, ಎಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಪ್ರಶ್ನಿಸಿದೆ. ಆದರೆ ಮೊದಲ ಪ್ರಶ್ನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಕೇವಲ 2 ಹಾಗೂ 3ನೇ ಪ್ರಶ್ನೆಗಷ್ಟೇ ಇಲಾಖೆ ಉತ್ತರಿಸಿದೆ. ಆದರೆ ಸರ್ಕಾರ ಹೇಳಿಕೊಳ್ಳುತ್ತಿರುವಂತೆ ಉದ್ಯೋಗ ಸೃಷ್ಟಿ ಬಗ್ಗೆ ಯಾವುದೇ ಅಂಕಿ ಅಂಶಗಳನ್ನು ನೀಡಿಲ್ಲ.
ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಕೂಡಾ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಯಾವುದೇ ನಿಖರ ಅಂಕಿ ಸಂಖ್ಯೆಗಳಿಲ್ಲ ಎಮದು ಹೇಳಿದ್ದರು. 2017ರ ಜುಲೈನಲ್ಲಿ ಮುದ್ರಾ ಸಿಇಒ ಜೀಜಿ ಮೆಮ್ಮನ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಮುದ್ರಾ ಯೋಜನೆಯಡಿ ನೀಡಿರುವ ಶೇಕಡ 90ರಷ್ಟು ಸಾಲಗಳು 50 ಸಾವಿರಕ್ಕಿಂತ ಕಡಿಮೆ ಮೊತ್ತದ್ದು. ಈ ಹಿನ್ನೆಲೆಯಲ್ಲಿ ಇದು ಎಷ್ಟರ ಮಟ್ಟಿಗೆ ಉದ್ಯೋಗ ಸೃಷ್ಟಿಸಿರಬಹುದು ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತಿದೆ.