ಎಲ್ಲರ ಕೃಷಿ ಸಾಲಮನ್ನಾ: ಕಾಂಗ್ರೆಸ್ ಭರವಸೆ
ಪಾಟ್ನಾ,ಫೆ.3: ಈಗಾಗಲೇ ಬಡವರಿಗೆ ಕನಿಷ್ಟ ಆದಾಯ ಭರವಸೆಯನ್ನು ಘೋಷಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರವಿವಾರ ಮತ್ತೊಂದು ದೊಡ್ಡ ಘೋಷಣೆಯನ್ನು ಮಾಡಿದ್ದು ಅಧಿಕಾರಿಕ್ಕೆ ಬಂದರೆ ದೇಶದ ಎಲ್ಲ ಕೃಷಿಕರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸಾಲಮನ್ನಾ ಭರವಸೆ ಈಗಾಗಲೇ ಮಧ್ಯ ಪ್ರದೇಶ, ಛತ್ತೀಸ್ಗಡ ಮತ್ತು ರಾಜಸ್ಥಾನದಲ್ಲಿ ನಡೆದ ರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿರುವುದು ಕಂಡುಬಂದಿದೆ. ಈ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ತನ್ನ ಭರವಸೆಯನ್ನು ಕಾಂಗ್ರೆಸ್ ಈಡೇರಿಸಿದೆ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಿಹಾರದ ಪಾಟ್ನಾದಲ್ಲಿ ರವಿವಾರ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶಾದ್ಯಂತ ರೈತರ ಸಾಲಮನ್ನ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ಈ ವೇಳೆ ಅವರೊಂದಿಗೆ ತೇಜಸ್ವಿ ನಾಯಕ್, ಶರದ್ ಯಾದವ್ ಹಾಗೂ ರಾಜ್ಯದ ಇತರ ವಿಪಕ್ಷ ನಾಯಕರು ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಬಿಹಾರ ಮತ್ತು ದೇಶಾದ್ಯಂತದ ರೈತರನ್ನು ಅವಮಾನಿಸಿದ್ದಾರೆ. ನೀವು ರೈತರನ್ನು ಅವಮಾನಿಸಿದರೆ ಅವರು ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ. ನಮಗೆ ಕಾಂಗ್ರೆಸ್ ಬೇಕು, ಬಿಜೆಪಿಯಲ್ಲ ಎಂದು ರೈತರು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ತಿಳಿಸಿದ್ದಾರೆ.
ಇತ್ತೀಚಿನ ಮಧ್ಯಂತರ ಬಜೆಟ್ನಲ್ಲಿ ಕೇಂದ್ರ ಸರಕಾರ ಸಣ್ಣ ಮತ್ತು ಸೀಮಿತ ರೈತರಿಗೆ ನಗದು ವರ್ಗಾವಣೆ ಯೋಜನೆಯನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಲಮನ್ನಾ ಯೋಜನೆಯ ಭರವಸೆ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರೈತರಿಗೆ ವಾರ್ಷಿಕ ಆರು ಸಾವಿರ ರೂ. ನಗದು ವರ್ಗಾವಣೆ ಮಾಡುವ ಕೇಂದ್ರದ ಯೋಜನೆ ರೈತರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಆರೋಪಿಸಿದೆ.