ಕಳ್ಳಭಟ್ಟಿ ಸಾರಾಯಿ ದುರಂತಕ್ಕೆ ಸರಕಾರದ ನಿರ್ಲಕ್ಷ್ಯ ಕಾರಣ: ಅಖಿಲೇಶ್ ಟೀಕೆ
ಲಕ್ನೊ, ಫೆ.10: ಕಳ್ಳಭಟ್ಟಿ ಸಾರಾಯಿ ಸೇವಿಸಿ ಹಲವರು ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರಕಾರವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.
ರಾಜ್ಯದಲ್ಲಿ ಇಂತಹ ಕೃತ್ಯ ನಡೆಯುತ್ತಿರುವ ಬಗ್ಗೆ ವಿಪಕ್ಷಗಳು ಸರಕಾರವನ್ನು ಈ ಹಿಂದೆಯೇ ಎಚ್ಚರಿಸಿದ್ದರೂ , ಕೆಲವು ಬಿಜೆಪಿ ಮುಖಂಡರು ಇದರಲ್ಲಿ ಶಾಮೀಲಾಗಿದ್ದ ಕಾರಣ ಸರಕಾರ ನಿರ್ಲಕ್ಷ ವಹಿಸಿತ್ತು. ಸರಕಾರದ ಬೆಂಬಲವಿಲ್ಲದೆ ಇಂತಹ ವ್ಯವಹಾರ ನಡೆಯಲು ಸಾಧ್ಯವಿಲ್ಲ. ತಮಗೆ ಆಡಳಿತ ನಡೆಸಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಬಿಜೆಪಿ ಒಪ್ಪಿಕೊಳ್ಳಬೇಕು ಎಂದು ಅಖಿಲೇಶ್ ಹೇಳಿದರು.
ರಾಜ್ಯದೊಳಗೆ ಅಕ್ರಮವಾಗಿ ಸಾಗಿಸುವ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ ಸಹಾರನ್ಪುರದಲ್ಲಿ 46 ಮಂದಿ ಮತ್ತು ಕುಶಿನಗರದಲ್ಲಿ 10 ಮಂದಿ ಮೃತಪಟ್ಟಿರುವುದಾಗಿ ಉತ್ತರಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಕುಮಾರ್ ತಿಳಿಸಿದ್ದಾರೆ. ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳ ತಂಡ ರಾಜ್ಯಾದ್ಯಂತ ಸಂಘಟಿತ ಕಾರ್ಯಾಚರಣೆ ನಡೆಸುತ್ತಿದೆ ಎಂದವರು ತಿಳಿಸಿದ್ದಾರೆ.