ಅಂಬಾನಿಗೆ ಬಾಗಿಲು ತೆರೆದದ್ದೇ ಪ್ರಧಾನಿ : ರಾಹುಲ್ ವಾಗ್ದಾಳಿ
ರಫೇಲ್ ಒಪ್ಪಂದ
ಹೊಸದಿಲ್ಲಿ, ಫೆ.11: ರಫೇಲ್ ಒಪ್ಪಂದದಲ್ಲಿ ‘ಭ್ರಷ್ಟಾಚಾರ ವಿರೋಧ ಷರತ್ತನ್ನು’ ಸರಕಾರ ರದ್ದುಪಡಿಸಿದೆ ಎಂಬ ಮಾಧ್ಯಮದ ವರದಿಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ವಿರುದ್ಧದ ಟೀಕೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವಾಯುಪಡೆಗೆ ಸಿಗಬೇಕಿದ್ದ 30 ಸಾವಿರ ಕೋಟಿ ರೂ. ಹಣವನ್ನು ಕದಿಯಲು ಅನಿಲ್ ಅಂಬಾನಿಗೆ ಮೋದಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ರಫೇಲ್ ಒಪ್ಪಂದವು ಭಾರತ ಸರಕಾರ ಪ್ರಸ್ತಾವಿಸಿರುವ ಅಭೂತಪೂರ್ವ ರಿಯಾಯಿತಿಯನ್ನು ಒಳಗೊಂಡಿದೆ. ಭ್ರಷ್ಟಾಚಾರ ನಡೆದರೆ ದಂಡ ವಿಧಿಸುವ ಷರತ್ತು, ಎಸ್ಕ್ರೋ ಖಾತೆಯ ಮೂಲಕ ಹಣ ಪಾವತಿಸುವುದು ಮುಂತಾದ ಪ್ರಮುಖ ಅಂಶಗಳನ್ನು ಒಪ್ಪಂದಕ್ಕೆ ಸಹಿ ಹಾಕುವ ಕೆಲವೇ ದಿನಗಳ ಮೊದಲು ಕೈಬಿಡಲಾಗಿದೆ ಎಂದು ಮಾಧ್ಯಮವೊಂದರಲ್ಲಿ ವರದಿಯಾಗಿದೆ. ‘ನೊಮೊ’ (ನೋ ಮೋರ್) ಲಂಚ ವಿರೋಧಿ ಷರತ್ತು. ಭಾರತೀಯ ವಾಯುಪಡೆಯಿಂದ 30 ಸಾವಿರ ಕೋಟಿ ರೂ. ಕದಿಯಲು ಚೌಕಿದಾರನೇ ಬಾಗಿಲು ತೆಗೆದು ಅನಿಲ್ ಅಂಬಾನಿಗೆ ಅವಕಾಶ ಮಾಡಿಕೊಟ್ಟಿದ್ದಾನೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಕಾವಲುಗಾರನೇ ಕಳ್ಳನಾಗಿದ್ದಾನೆ ಎಂಬುದು ಈಗ ಸ್ಪಷ್ಟವಾಗಿದೆ ಎಂದೂ ರಾಹುಲ್ ಹೇಳಿದ್ದಾರೆ.