ನಾನು ವಾಪಸ್ ನೀಡುತ್ತೇನೆಂದ ಹಣ ತೆಗೆದುಕೊಳ್ಳುವಂತೆ ಬ್ಯಾಂಕುಗಳಿಗೇಕೆ ಸೂಚಿಸುತ್ತಿಲ್ಲ
ಪ್ರಧಾನಿಗೆ ಮಲ್ಯ ಪ್ರಶ್ನೆ
ಹೊಸದಿಲ್ಲಿ, ಫೆ.14: ಬ್ಯಾಂಕುಗಳಿಗೆ ಸಾವಿರಾರು ಕೋಟಿ ಸಾಲ ಬಾಕಿಯಿರಿಸಿರುವ ಮದ್ಯ ದೊರೆ ವಿಜಯ್ ಮಲ್ಯ ಇದೀಗ ಪ್ರಧಾನಿ ಬಳಿ ಒಂದು ಪ್ರಶ್ನೆ ಕೇಳಿದ್ದಾರೆ. ತಾವು ಕರ್ನಾಟಕ ಹೈಕೋರ್ಟ್ ಮುಂದೆ ಬಾಕಿ ಚುಕ್ತಾಗೊಳಿಸುವ ಕುರಿತಂತೆ ಮಾಡಿರುವ ಆಫರ್ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಹಣ ಪಡೆದುಕೊಳ್ಳುವಂತೆ ಬ್ಯಾಂಕುಗಳಿಗೇಕೆ ಸೂಚಿಸುತ್ತಿಲ್ಲ” ಎಂದು ಅವರು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.
“ಪ್ರಧಾನಿ ಸಂಸತ್ತಿನಲ್ಲಿ ಇತ್ತೀಚೆಗೆ ಮಾಡಿದ ಕೊನೆಯ ಭಾಷಣದಲ್ಲಿ ಹೆಸರು ಹೇಳದೆ ರೂ 9,000 ಕೋಟಿ ಹಣದೊಂದಿಗೆ ಓಡಿ ಹೋದ ವ್ಯಕ್ತಿಯ ಬಗ್ಗೆ ಉಲ್ಲೇಖಿಸಿದ್ದರು. ಮಾಧ್ಯಮಗಳ ವರದಿ ಪ್ರಕಾರ ಅವರು ನನ್ನನ್ನು ಉಲ್ಲೇಖಿಸಿದ್ದರೆಂದು ನಾನು ತಿಳಿಯುತ್ತೇನೆ. ನಾನು ಆಫರ್ ಮಾಡಿದ ಹಣವನ್ನು ತೆಗೆದುಕೊಳ್ಳುವಂತೆ ಬ್ಯಾಂಕುಗಳಿಗೆ ಅವರೇಕೆ ಸೂಚಿಸುತ್ತಿಲ್ಲ ಎಂದು ಅವರನ್ನು ಗೌರವಪೂರ್ವಕವಾಗಿ ಕೇಳಲು ಇಚ್ಛಿಸುತ್ತೇನೆ. ಕನಿಷ್ಠ ಕಿಂಗ್ ಫಿಶರ್ ಸಂಸ್ಥೆಗೆ ನೀಡಿದ ಸಾರ್ವಜನಿಕ ಹಣದ ಸಂಪೂರ್ಣ ವಾಪಸಾತಿಯಾಗಿದ್ದಕ್ಕೆ ತಾವು ಕಾರಣರು ಎಂದಾದರೂ ಅವರು ಹೇಳಿಕೊಳ್ಳಬಹುದು'' ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.
ಇಂಗ್ಲೆಂಡ್ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಇತ್ತೀಚೆಗೆ ಮಲ್ಯರ ಗಡೀಪಾರು ಆದೇಶಕ್ಕೆ ಅನುಮತಿ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.