ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ: ಪ್ರಧಾನಿ ಮೋದಿ
ಹೊಸದಿಲ್ಲಿ, ಫೆ.15: ಪುಲ್ವಾಮಾದಲ್ಲಿ ದಾಳಿ ನಡೆಸಿದ ಉಗ್ರರಿಗೆ ತಕ್ಕ ಶಾಸ್ತಿ ಮಾಡುತ್ತೇವೆ . ನಮಗೆ ನಮ್ಮ ಸೈನಿಕರ ಶೌರ್ಯ, ಶಕ್ತಿಯ ಮೇಲೆ ನಂಬಿಕೆ ಇದೆ. ದಾಳಿ ನಡೆಸಿದವರಿಗೆ ಸೂಕ್ತ ಪಾಠ ಕಲಿಸಲು ನಮ್ಮ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಉಗ್ರರ ದಾಳಿಯಲ್ಲಿ ವೀರ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಸಂತಾಪ ವ್ಯಕ್ತಪಡಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಯೋಧರ ಮೇಲಿನ ದಾಳಿಯಂದ ತೀವ್ರ ದು:ಖವಾಗಿದೆ . ಭಯೋತ್ಪಾದನಾ ಸಂಘಟನೆಗಳು ದಾಳಿ ನಡೆಸಿ ದೊಡ್ಡ ತಪ್ಪು ಮಾಡಿದೆ. ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ದೇಶದ ಜನರ ಸಿಟ್ಟನ್ನು ಅರ್ಥ ಮಾಡಿಕೊಳ್ಳುತ್ತೇನೆ. ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ . ಜನರ ರಕ್ತ ಕುದಿಯುತ್ತಿದೆ ಎಂದರು.
ನಾವು ಹುತಾತ್ಮ ಯೋಧರ ಕನಸನ್ನು ನನಸು ಮಾಡುತ್ತೇವೆ. ದೇಶದ ಸುರಕ್ಷತೆ, ಸಮಗ್ರತೆಗೆ ಮೊದಲ ಆದ್ಯತೆ ನೀಡಲಾಗುವುದು. ನೆರೆ ದೇಶಗಳು ಭಾರತವನ್ನು ನಾಶಗೊಳಿಸುವ ಕನಸು ಕಾಣುತ್ತಿದೆ. ವಿನಾಶದ ಅಂಚಿನಲ್ಲಿರುವ ಪಾಕಿಸ್ತಾನಕ್ಕೆ ಭಾರತವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ ನೀಡಿದರು.
ನಾಳೆ ಸರ್ವ ಪಕ್ಷ ಸಭೆ : ಸಚಿವ ಜೇಟ್ಲಿ
ಪುಲ್ವಮಾ ಘಟನೆ ಬಗ್ಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ದಾಳಿಯ ಹಿಂದೆ ಇರುವವರು ಬೆಲೆ ತೆರಬೇಕಾಗುತ್ತದೆ. ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಬಹಿರಂಗಪಡಿಸಲು ಇಲ್ಲಿ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಾಳೆ ಸರ್ವ ಪಕ್ಷ ಸಭೆ ಕರೆಯಲಾಗಿದೆ. ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ