ತನ್ನ ಪುತ್ರಿಯನ್ನೇ ಅಪಹರಿಸಿದ ಬಿಜೆಪಿ ಮುಖಂಡನ ಬಂಧನ
ಕೊಲ್ಕತ್ತಾ, ಫೆ.17: ತನ್ನ ಪುತ್ರಿಯನ್ನೇ ಅಪಹರಿಸಿದ ಆರೋಪದಲ್ಲಿ ಪಶ್ಚಿಮ ಬಂಗಾಳದ ಸ್ಥಳೀಯ ಬಿಜೆಪಿ ಮುಖಂಡ ಸುಪ್ರಭಾತ್ ಬಾತ್ಯಬ್ಯಾಲ್ ರನ್ನು ಇಬ್ಬರು ಸಹಚರರೊಂದಿಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸುಪ್ರಭಾತ್ ರ 22 ವರ್ಷದ ಪುತ್ರಿಯನ್ನು ಬಂದೂಕು ತೋರಿಸಿ ಅಪಹರಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಲಾಗಿತ್ತು. ರವಿವಾರ ಇವರನ್ನು ಉತ್ತರ ದಿನಾಜ್ ಪುರ ಜಿಲ್ಲೆಯ ರೈಲ್ವೇ ಸ್ಟೇಷನ್ ಬಳಿ ಪತ್ತೆಹಚ್ಚಿ ರಕ್ಷಿಸಲಾಗಿದೆ. ತಂದೆಯೇ ಮಗಳನ್ನು ಅಪಹರಿಸಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದೊಳಗಿನ ಸಮಸ್ಯೆ ಅಥವಾ ಅನುಕಂಪ ಗಿಟ್ಟಿಸಿಕೊಂಡು ರಾಜಕೀಯ ಲಾಭ ಪಡೆಯುವುದು ಪ್ರಕರಣದ ಹಿಂದಿನ ಉದ್ದೇಶವಾಗಿರಬಹುದು. ಬಂಧಿತ ಮೂವರನ್ನೂ ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ಸಿಪಿಎಂ ಪಕ್ಷದ ಸದಸ್ಯನಾಗಿದ್ದ ಸುಪ್ರಭಾತ್ ಬಳಿಕ ಟಿಎಂಸಿಗೆ ಪಕ್ಷಾಂತರಗೊಂಡಿದ್ದರು. ಐದು ತಿಂಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಸುಪ್ರಭಾತ್ ಪುತ್ರಿಯ ಅಪಹರಣದ ವಿಷಯ ವರದಿಯಾಗುತ್ತಿದ್ದಂತೆಯೇ ಅವರ ಬೆಂಬಲಿಗರು ಜಿಲ್ಲೆಯ ಹಲವೆಡೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಲ್ಲದೆ ಸ್ಥಳೀಯ ಟಿಎಂಸಿ ಮುಖಂಡರ ಮನೆಗೆ ಕಲ್ಲೆಸೆದು ದಾಂಧಲೆ ನಡೆಸಿದ್ದರು.