ಬಿಜೆಪಿ ಈ ವಿಚಾರದಲ್ಲಿ ವಿಫಲವಾದರೆ ಮೋದಿ ಮುಂದಿನ ಪ್ರಧಾನಿಯಲ್ಲ: ಶಿವಸೇನೆ ನಾಯಕ ರಾವತ್ ಹೇಳಿದ್ದೇನು?
ಲೋಕಸಭಾ ಚುನಾವಣೆ
ಹೊಸದಿಲ್ಲಿ, ಫೆ.20: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಬಿಜೆಪಿ 100 ಸೀಟುಗಳನ್ನು ಕಡಿಮೆ ಗೆದ್ದಲ್ಲಿ ಮುಂದಿನ ಪ್ರಧಾನ ಮಂತ್ರಿ ಯಾರಾಗಬೇಕೆಂದು ಎನ್ ಡಿಎ ನಿರ್ಧರಿಸಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ,
indianexpress.com ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಮೋದಿ ಸರಕಾರದೊಂದಿಗೆ ಕೆಲ ವಿಚಾರಗಳಲ್ಲಿ ವೈಮನಸ್ಸಿರುವುದನ್ನು ಒಪ್ಪಿಕೊಂಡರು. “ಶಿವಸೇನೆಯು ಯಾವತ್ತೂ ಸತ್ಯವನ್ನೇ ಹೇಳಿದೆ. ರೈತರ ಫಲವತ್ತಾದ ನೆಲದಲ್ಲಿ ಕೈಗಾರಿಕೆಗಳು, ಸ್ಮಾರ್ಟ್ ಸಿಟಿಗಳು ನಿರ್ಮಾಣವಾಗುವುದನ್ನು ನಾವು ವಿರೋಧಿಸಿದ್ದೇವೆ. ರೈತರಿಗೆ ಸಮಸ್ಯೆಯಾಗುವ ಕಾರಣ ಬುಲೆಟ್ ಟ್ರೈನನ್ನು ನಾವು ವಿರೋಧಿಸಿದ್ದೆವು. ಅದರಂತೆ ನಿರುದ್ಯೋಗ ಸಮಸ್ಯೆ ಸೃಷ್ಟಿಸಿದ ನೋಟ್ ಬ್ಯಾನ್ ನಿರ್ಧಾರವನ್ನೂ ನಾವು ವಿರೋಧಿಸಿದ್ದೆವು. ರಾಮ ಮಂದಿರದ ಬಗ್ಗೆಯೂ ನಾವು ಧ್ವನಿಯೆತ್ತಿದ್ದೆವು ಎಂದವರು ಹೇಳಿದರು.
‘ಸಾಮ್ನಾದಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಮುಂದಿನ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬರುವ ಸಾಧ್ಯತೆಯಿದ್ದು, ಗಡ್ಕರಿ ಅದಕ್ಕಾಗಿ ಕಾಯುತ್ತಿದ್ದಾರೆ. ಹಾಗಾದರೆ ಗಡ್ಕರಿ ಮುಂದಿನ ಪ್ರಧಾನಿಯಾಗುವ ಸಾಧ್ಯತೆಯಿದೆಯೇ?” ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಗಡ್ಕರಿ ಪ್ರಧಾನಿಯಾಗಬೇಕೆಂದು ನಾನು ಹೇಳುತ್ತಿಲ್ಲ. ಇಂತಹ ವರದಿಗಳು ಮಾಧ್ಯಮಗಳು ಮತ್ತು ಆರೆಸ್ಸೆಸ್ ನಿಂದ ಬರುತ್ತಿದೆ. ಗಡ್ಕರಿ ಪ್ರಧಾನಿಯಾಗಬೇಕೆಂಬ ಬೇಡಿಕೆಯನ್ನೂ ನಾವು ಅವರ (ಬಿಜೆಪಿ) ಮುಂದಿಟ್ಟಿಲ್ಲ. ಆದರೆ ಗಡ್ಕರಿ ಮಾತ್ರ ಯಾಕೆ? ಬಿಜೆಪಿಯಲ್ಲಿ ಇನ್ನೂ ಹಲವರಿದ್ದಾರೆ. ಕಳೆದ ಬಾರಿಗಿಂತ ಬಿಜೆಪಿ 100 ಸೀಟುಗಳು ಕಡಿಮೆ ಗೆದ್ದರೆ ಮುಂದಿನ ಪ್ರಧಾನಿ ಯಾರಾಗಬೇಕೆಂದು ಎನ್ ಡಿಎ ನಿರ್ಧರಿಸಲಿದೆ” ಎಂದವರು ಹೇಳಿದರು.