ಪ.ಬಂಗಾಳ: ಟಿಎಂಸಿ ಮುಖಂಡನ ಗುಂಡಿಕ್ಕಿ ಹತ್ಯೆ
ಕೋಲ್ಕತಾ, ಫೆ.25: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಕಾರ್ತಿಕ್ ನಸ್ಕರ್ ಹಾಗೂ ಪಕ್ಷದ ಕಾರ್ಯಕರ್ತನನ್ನು ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯಲ್ಲಿ ಪ್ರತ್ಯೇಕ ಘಟನೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂಗ್ರಾಕಾಲಿ ಎಂಬಲ್ಲಿಂದ ಮನೆಗೆ ಬೈಕ್ನಲ್ಲಿ ಮರಳುತ್ತಿದ್ದ ನಸ್ಕರ್ರನ್ನು ದರಿಯಾಹರಿ ಎಂಬಲ್ಲಿ ಅಡ್ಡಗಟ್ಟಿದ ತಂಡವೊಂದು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ಬೈಕ್ನಿಂದ ಕೆಳಗೆ ಬಿದ್ದ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ನಸ್ಕರ್ರೊಂದಿಗೆ ಬೈಕ್ನಲ್ಲಿ ಮತ್ತೊಬ್ಬ ಪ್ರಯಾಣಿಸುತ್ತಿದ್ದು ಘಟನೆ ನಡೆದ ಬಳಿಕ ಆತ ನಾಪತ್ತೆಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಸ್ಕರ್ ಅವರ ಹತ್ಯೆಯ ಘಟನೆಗೂ ಮೊದಲು ಮತ್ತೊಬ್ಬ ಟಿಎಂಸಿ ಬೆಂಬಲಿಗನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಟಿಎಂಸಿ ಬೆಂಬಲಿಗ ಸೂರತ್ ಅಲಿ ಮಂಡಲ್ ಎಂಬಾತನನ್ನು ರವಿವಾರ ಸಂಜೆ ಕುಲ್ತುಲಿ ಎಂಬಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಸಾಯಿಸಿದ್ದಾರೆ.
ಮಾರುಕಟ್ಟೆಯಿಂದ ಮನೆಗೆ ಮರಳುತ್ತಿದ್ದ ಮಂಡಲ್ರನ್ನು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ಕೈದು ಯುವಕರು ಸಮೀಪದಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.