ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಮುಂದುವರಿದ ಶೆಲ್, ಗುಂಡಿನ ದಾಳಿ
ಶ್ರೀನಗರ, ಫೆ. 28: ಜಮ್ಮು ಹಾಗೂ ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸೇನೆಗಳು ಗುರುವಾರ ಸಣ್ಣ ಶಸ್ತ್ರಾಸ್ತ ಹಾಗೂ ಮೋರ್ಟಾರ್ ಬಳಸಿ ಪರಸ್ಪರ ದಾಳಿ ನಡೆಸಿದವು.
ಪೂಂಛ್ ವಲಯದ ಕೃಷ್ಣ ಘಾತಿಯಲ್ಲಿ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸುವ ಹಾಗೂ ಮೋರ್ಟಾರ್ ಶೆಲ್ ಸಿಡಿಸುವ ಮೂಲಕ ಅಪ್ರಚೋದಿತ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿತು ಎಂದು ರಕ್ಷಣಾ ವಕ್ತಾರ ಲೆ. ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.
ಬೆಳಗ್ಗೆ 6 ಗಂಟೆಗೆ ಆರಂಭವಾದ ಗುಂಡು ಹಾಗೂ ಮೋರ್ಟಾರ್ ಶೆಲ್ ದಾಳಿ ಒಂದು ಗಂಟೆಗಳ ಕಾಲ ಮುಂದುವರಿಯಿತು. ಭಾರತೀಯ ಸೇನಾ ಪಡೆ ಪರಿಣಾಮಕಾರಿಯಾಗಿ ಪ್ರತಿ ದಾಳಿ ನಡೆಸಿತು. ಗುಂಡಿನ ಚಕಮಕಿ ಬೆಳಗ್ಗೆ 7 ಗಂಟೆಗೆ ನಿಂತಿತು ಎಂದು ಅವರು ತಿಳಿಸಿದ್ದಾರೆ.
ಅಪರಾಹ್ನ ಪೂಂಛ್ನ ಕೃಷ್ಣ ಘಾತಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಶೆಲ್ ಹಾಗೂ ಗುಂಡಿನ ದಾಳಿ ನಡೆಯಿತು. ಪಾಕಿಸ್ತಾನದ ಸೇನಾ ಪಡೆ ಅಪರಾಹ್ನ 1 ಗಂಟೆಗೆ ಅಪ್ರಚೋದಿತವಾಗಿ ಗುಂಡು ಹಾಗೂ ಶೆಲ್ ದಾಳಿ ನಡೆಸಿತು. ಇದಕ್ಕೆ ಪ್ರತಿ ದಾಳಿ ನಡೆಸಲಾಯಿತು ಎಂದು ಭಾರತೀಯ ಸೇನೆ ತಿಳಿಸಿದೆ.