ಜನರು ವಂಶಾಡಳಿತವನ್ನಲ್ಲ,ಪ್ರಾಮಾಣಿಕತೆಯನ್ನು ಬಯಸಿದ್ದರು: ಪ್ರಧಾನಿ ಮೋದಿ
ಕನ್ಯಾಕುಮಾರಿ(ತ.ನಾ),ಮಾ:1:ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ತರಾಟೆಗೆತ್ತಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು,ಜನರು ವಂಶಾಡಳಿತವನ್ನು ಬಯಸಿರಲಿಲ್ಲ,ಅವರು ಪ್ರಾಮಾಣಿಕತೆಯನ್ನಷ್ಟೇ ಬಯಸಿದ್ದರು ಎಂದು ಹೇಳಿದರು.
ಹಲವಾರು ಯೋಜನೆಗಳು ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳಿಗೆ ಇಲ್ಲಿ ಚಾಲನೆ ನೀಡಿ ಮಾತನಾಡಿದ ಅವರು,ವೀರ ಪೈಲಟ್ ಅಭಿನಂದನ್ ಬಗ್ಗೆ ಪ್ರತಿ ಭಾರತೀಯನಿಗೂ ಹೆಮ್ಮೆ ಇದೆ ಎಂದರು.
2014ರಲ್ಲಿ 30 ವರ್ಷಗಳ ಬಳಿಕ ಬಿಜೆಪಿಯ ರೂಪದಲ್ಲಿ ಪಕ್ಷವೊಂದು ಸಂಸತ್ತಿನಲ್ಲಿ ಸಂಪೂರ್ಣ ಬಹುಮತ ಪಡೆದಿತ್ತು ಎಂದ ಅವರು,ಬಿಜೆಪಿಗೆ ಮತಗಳನ್ನು ನೀಡುವ ಮೂಲಕ ಜನರು ಪ್ರಾಮಾಣಿಕತೆಯನ್ನು ಬಯಸಿದ್ದರು,ವಂಶಾಡಳಿತವನ್ನಲ್ಲ. ಜನತೆ ಅಭಿವೃದ್ಧಿಯನ್ನು ಬಯಸಿದ್ದರು ವಿನಃ ಅವನತಿಯನ್ನಲ್ಲ. ಅವರು ಪ್ರಗತಿಯನ್ನು ಬಯಸಿದ್ದರು,ನೀತಿ ನಿಷ್ಕ್ರಿಯತೆಯನ್ನಲ್ಲ ಎಂದರು.
ಮಧುರೈನಿಂದ ಚೆನ್ನೈಗೆ ತೇಜಸ್ ಎಕ್ಸ್ಪ್ರೆಸ್ನ ಮೊದಲ ಸಂಚಾರಕ್ಕೆ ಇಲ್ಲಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಮೋದಿ,ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಾಗಿರುವ ತೇಜಸ್ ಎಕ್ಸ್ಪ್ರೆಸ್ ‘ಮೇಕ್ ಇನ್ ಇಂಡಿಯಾ’ದ ಅತ್ಯುತ್ತಮ ನಿದರ್ಶನವಾಗಿದೆ ಎಂದು ಹೇಳಿದರು.