ಮತದಾನದ ದಿನ ಇವಿಎಂ ಪ್ರಾತ್ಯಕ್ಷಿಕೆಯ ಬಗ್ಗೆ ಎಚ್ಚರವಿರಲಿ: ಪಕ್ಷದ ಕಾರ್ಯಕರ್ತರಿಗೆ ಶರದ್ ಪವಾರ್ ಕಿವಿಮಾತು
ಮುಂಬೈ, ಮಾ.10: ಮತದಾನದ ದಿನದಂದು ಬೂತ್ಗಳಲ್ಲಿ ನಡೆಸಲಾಗುವ ವಿದ್ಯುನ್ಮಾನ ಮತ ಯಂತ್ರ(ಇವಿಎಂ) ಪ್ರಾತ್ಯಕ್ಷಿಕೆ ಸಂದರ್ಭ ಗರಿಷ್ಟ ಜಾಗ್ರತೆ ವಹಿಸುವಂತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಇವಿಎಂಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುವ ಸಾಧ್ಯತೆಯಿದೆ ಎಂದು ಹಲವಾರು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪವಾರ್ ಪಕ್ಷದ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಅವರು, ಬಿಜೆಪಿಯ ಮೇಲೆ ವಿಶ್ವಾಸ ಇರಿಸುವಂತಿಲ್ಲ. ಆದ್ದರಿಂದ ಮತದಾನದ ದಿನ ಪ್ರತೀ ಮತದಾನ ಕೇಂದ್ರಕ್ಕೂ ಭೇಟಿ ನೀಡಿ ಮತದಾನ ಪ್ರಕ್ರಿಯೆ ಕ್ರಮಬದ್ಧವಾಗಿ ನಡೆಯುತ್ತಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು. ಎನ್ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಅವರೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಇವಿಎಂಗಳು ಅಸಮರ್ಪಕವಾಗಿ ಕಾರ್ಯಾಚರಿಸುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕೇವಲ ಎರಡು ಅಥವಾ ಮೂರು ರಾಷ್ಟ್ರಗಳನ್ನು ಬಿಟ್ಟರೆ ಉಳಿದೆಲ್ಲಾ ರಾಷ್ಟ್ರಗಳೂ ಮತಪತ್ರದ ಮೂಲಕ ಮತದಾನ ನಡೆಸುವ ವ್ಯವಸ್ಥೆಗೆ ಮರಳಿವೆ ಎಂದು ಹೇಳುತ್ತಿರುವ ವಿಪಕ್ಷಗಳು, ಇವಿಎಂ ಮೂಲಕ ಮತದಾನ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಆದರೆ ಇದನ್ನು ತಳ್ಳಿಹಾಕಿರುವ ಚುನಾವಣಾ ಆಯೋಗ, ಇವಿಎಂಗಳಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದೆ.