ಲೋಕಸಭೆ ಚುನಾವಣೆಯಲ್ಲಿ ಶರದ್ ಪವಾರ್ ಸ್ಪರ್ಧೆ ಇಲ್ಲ
ಪುಣೆ, ಮಾ. 11: ಮುಂದಿನ ತಿಂಗಳು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಮಾಧಾ ಕ್ಷೇತ್ರದಿಂದ ಸ್ವರ್ಧಿಸದೇ ಇರಲು ನಿರ್ಧರಿಸಿದ್ದೇನೆ ಎಂದು ಎನ್ಸಿಪಿ ವರಿಷ್ಠ ಶರದ್ ಪವಾರ್ ಸೋಮವಾರ ಹೇಳಿದ್ದಾರೆ. ಪ್ರಸ್ತುತ ಮಾಧಾ ಕ್ಷೇತ್ರವನ್ನು ಅವರ ಪಕ್ಷದ ನಾಯಕ ವಿಜಯ ಸಿಂಗ್ ಮೋಹಿತೆ ಪಾಟಿಲ್ ಪ್ರತಿನಿಧಿಸುತ್ತಿದ್ದಾರೆ.
ಅಲ್ಲಿಂದ ಪವಾರ್ ಅವರು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಇತ್ತೀಚೆಗೆ ವದಂತಿ ಹಬ್ಬಿದ ಬಳಿಕ ಪವಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ. ನಾನು ಮಾಧಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ತೀವ್ರ ಆಗ್ರಹ ಇದೆ. ಆದರೆ, ನಾನು ಇದುವರೆಗೆ ಸ್ಪರ್ಧಿಸಲು ನಿರ್ಧರಿಸಿಲ್ಲ ಎಂದು ಪವಾರ್ ಹೇಳಿದ್ದಾರೆ. ಈ ನಡುವೆ ಪುಣೆ ಜಿಲ್ಲೆಯ ಲೋಕಸಭಾ ಕ್ಷೇತ್ರವಾದ ಮಾವಲ್ನಿಂದ ಸೋದರಳಿಯ ಪಾರ್ಥ್ ಅಥವಾ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ಅವರನ್ನು ಕಣಕ್ಕಿಳಿಸುವ ಸೂಚನೆಯನ್ನು ಶರದ್ ಪವಾರ್ ನೀಡಿದ್ದಾರೆ. ‘‘ಪಾರ್ಥರನ್ನು ಮಾವಲ್ನಿಂದ ಕಣಕ್ಕಿಳಿಸಿ ಎಂದು ಹಲವರು ನನ್ನಲ್ಲಿ ಹೇಳುತ್ತಿದ್ದಾರೆ’’ ಎಂದು ಪವಾರ್ ಹೇಳಿದ್ದಾರೆ.
ಮಾಧಾದಿಂದ ಸ್ಪರ್ಧಿಸುವ ಬಗ್ಗೆ ಮರು ಚಿಂತನೆ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಪವಾರ್, ‘‘ನಾನು 14 ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಿದ್ದೇನೆ.’’ ಎಂದು ಹೇಳಿದ್ದಾರೆ.