ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರ್ಪಡೆ
ಅಹ್ಮದಾಬಾದ್,ಮಾ.12: ಗುಜರಾತ್ನಲ್ಲಿ ಕೋಟಾ ಚಳುವಳಿ ಆರಂಭಿಸಿ ದೇಶಾದ್ಯಂತ ಎಲ್ಲರ ಗಮನ ಸೆಳೆದ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಮಂಗಳವಾರ ಅಹ್ಮದಾಬಾದ್ನಲ್ಲಿ ನಡೆದ ಪಕ್ಷದ ಕ್ರಿಯಾ ಸಮಿತಿ ಸಭೆಯಲ್ಲಿ ಪಕ್ಷಾಧ್ಯಕ್ಷ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಮಾರ್ಚ್ 12ರಂದು ಮಹಾತ್ಮಾ ಗಾಂಧಿ ದಂಡಿ ಯಾತ್ರೆ ಆರಂಭಿಸಿದ್ದರು ಮತ್ತು ಬ್ರಿಟಿಶರನ್ನು ದೇಶದಿಂದ ಹೊರಗಟ್ಟುವುದಾಗಿ ತಿಳಿಸಿದ್ದರು. ಈ ಹಿಂದೆ ನಮ್ಮ ದೇಶವನ್ನು ಸುಭದ್ರಗೊಳಿಸಲು ಹೋರಾಡಿದ ಸುಭಾಶ್ ಚಂದ್ರ ಬೋಸ್, ಪಂಡಿತ್ ನೆಹರೂ, ಸರ್ದಾರ್ ಪಟೇಲ್, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಮುನ್ನಡೆಸಿರುವ ಅದೇ ಕಾಂಗ್ರೆಸನ್ನು ಸೇರುತ್ತಿದ್ದೇನೆ ಎಂದು ಪಟೇಲ್ ತಿಳಿಸಿದ್ದಾರೆ. ಗುಜರಾತ್ನ ಜಾಮ್ನಗರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಹಾರ್ದಿಕ್ ಪಟೇಲ್ ಕಳೆದ ವಾರ ವ್ಯಕ್ತಪಡಿಸಿದ್ದರು.
ಈ ಕ್ಷೇತ್ರವನ್ನು ಸದ್ಯ ಬಿಜೆಪಿಯ ಪೂನಮ್ಬೆನ್ ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಟೇಲ್ ಕಾಂಗ್ರೆಸನ್ನು ಬೆಂಬಲಿಸಿದ್ದರು. ಈ ಚುನಾವಣೆಯಲ್ಲಿ ರಾಜ್ಯದ 182 ವಿಧಾನಸಭಾ ಸ್ಥಾನಗಳ ಪೈಕಿ 81 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು.