ರಸ್ತೆಯಲ್ಲೇ ಯುವತಿಗೆ ಚೂರಿಯಿಂದ ಇರಿದು ಬೆಂಕಿ ಹಚ್ಚಿದ ದುಷ್ಕರ್ಮಿ
ತಿರುವಳ್ಳ,ಮಾ.12: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಭಗ್ನಪ್ರೇಮಿಯೊಬ್ಬ 22 ರ ಯುವತಿಗೆ ಚೂರಿಯಿಂದ ಇರಿದು ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ತಿರುವಳ್ಳ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸದ್ಯ ಯುವತಿ ಶೇ.70 ಸುಟ್ಟ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಕೃತ್ಯ ಎಸಗಿದ ನಂತರ ಆರೋಪಿ ಅಜಿನ್ ರೀ ಮ್ಯಾಥ್ಯೂ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರೂ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರೇಡಿಯೋಲಜಿ ಕೋರ್ಸ್ ಮಾಡುತ್ತಿರುವ ಯುವತಿಯನ್ನು ತಾನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ಆದರೆ ಆಕೆ ಮದುವೆಯ ನನ್ನ ಪ್ರಸ್ತಾವವನ್ನು ತಳ್ಳಿಹಾಕಿದ್ದಳು. ಅದಕ್ಕಾಗಿ ಆಕೆಯನ್ನು ಕೊಲ್ಲಲು ಯತ್ನಿಸಿದೆ ಎಂದು ವಿಚಾರಣೆಯ ವೇಳೆ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಸ್ಕೂಟರ್ನಿಂದ ಪೆಟ್ರೊಲ್ ಕ್ಯಾನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ನಡೆದ ಸಮಯದಲ್ಲಿ ಯುವತಿ ತನ್ನ ಮನೆಯಿಂದ ವಿದ್ಯಾಸಂಸ್ಥೆಯತ್ತ ತೆರಳುತ್ತಿದ್ದರು. ಈ ಬಗ್ಗೆ ಸಂತ್ರಸ್ತೆಯ ಹೆತ್ತವರು ಮತ್ತು ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.