ಭಾರತದ ಆಕ್ರಮಣಕಾರರನ್ನು ತೊಲಗಿಸಬೇಕು ಎಂದು ಹೇಳಿದ್ದ ಉಗ್ರ ಬ್ರೆಂಟನ್
ನ್ಯೂಝಿಲ್ಯಾಂಡ್ ಮಸೀದಿಯಲ್ಲಿ ಶೂಟೌಟ್ ಪ್ರಕರಣ
ಹೊಸದಿಲ್ಲಿ, ಮಾ.15: ನ್ಯೂಝಿಲ್ಯಾಂಡ್ನ ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ ನಡೆಸಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಆಸ್ಟ್ರೇಲಿಯಾದ ಪ್ರಜೆ ಬ್ರೆಂಟನ್ ಹ್ಯಾರಿಸನ್ ಟ್ಯಾರಂಟ್, ಆನ್ಲೈನ್ನಲ್ಲಿ ಪ್ರಕಟಿಸಿರುವ ತನ್ನ ನಿಲುವಿನಲ್ಲಿ , ಭಾರತ, ಚೀನಾ ಮತ್ತು ಟರ್ಕಿ ದೇಶಗಳ ‘ಆಕ್ರಮಣ’ದ ಬಗ್ಗೆ ತಿಳಿಸಿದ್ದಾನೆ.
‘ದಿ ಗ್ರೇಟ್ ರಿಪ್ಲೇಸ್ಮೆಂಟ್’ ಎಂಬ ಶಿರೋನಾಮೆಯ 74 ಪುಟಗಳ ಈ ‘ಪ್ರಣಾಳಿಕೆ’ಯಲ್ಲಿ ಮೂರು ರಾಷ್ಟ್ರಗಳನ್ನು ಪೂರ್ವದ ಸಂಭಾವ್ಯ ಶತ್ರುರಾಷ್ಟ್ರಗಳು ಎಂದು ಬಣ್ಣಿಸಿದ್ದಾನೆ. ಯಾವಾಗ , ಎಲ್ಲಿಂದ ಬಂದರೆಂಬುದನ್ನು ಪರಿಗಣಸದೆ ಈ ಆಕ್ರಮಣಕಾರರನ್ನು ಯುರೋಪ್ ನೆಲದಿಂದ ತೊಲಗಿಸಬೇಕು. ಆಫ್ರಿಕನ್ನರು , ಭಾರತೀಯರು, ಟರ್ಕಿಗಳು, ಯಹೂದಿಗಳು.. ಯಾರೇ ಆಗಿರಲಿ. ನಮ್ಮ ಜನರಲ್ಲದ, ಆದರೂ ನಮ್ಮ ನೆಲದಲ್ಲಿ ವಾಸಿಸುತ್ತಿರುವವರನ್ನು ತೊಲಗಿಸಬೇಕು ಎಂದು ಈತ ಹೇಳಿಕೊಂಡಿದ್ದಾನೆ.
ಟ್ಯಾರಂಟ್ನ ಹೆಸರಲ್ಲಿರುವ ಟ್ವಿಟರ್ ಖಾತೆ ಈ ಪ್ರಣಾಳಿಕೆಯನ್ನು ಪ್ರಕಟಿಸಿದೆ. ದಾಳಿಗೂ ಕೆಲವೇ ಗಂಟೆಯ ಮೊದಲು ಈ ಹೇಳಿಕೆಯನ್ನು 8 ಚಾನೆಲ್ನ ಸಂದೇಶ ವೇದಿಕೆಯಲ್ಲಿ ಅನಾಮಧೇಯ ಯೂಸರ್ ಬಳಸಿ ಪ್ರಕಟಿಸಲಾಗಿದೆ. ಈ ಪ್ರಣಾಳಿಕೆಯಲ್ಲಿ ಆತ ಯುರೋಪಿಯನ್ನರ, ಪಾಶ್ಚಿಮಾತ್ಯ ರಾಷ್ಟ್ರಗಳ, ಬಿಳಿಯ ವರ್ಣದವರ ಸಂಸ್ಕೃತಿ ಅವನತಿಯ ಹಾದಿಯಲ್ಲಿ ಸಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಹಾಗೂ ಬಹುಸಾಂಸ್ಕೃತಿಕತೆ ಮತ್ತು ವಲಸೆ ಕುರಿತು ಆಕ್ರೋಶ ಹೊರಗೆಡಹಿದ್ದ ಎಂದು ಟಿವಿ ಚಾನೆಲ್ ವರದಿ ಮಾಡಿದೆ.
ವಿಶೇಷವಾಗಿ ಚೀನಾ, ಟರ್ಕಿ, ಭಾರತ ಅಥವಾ ಈ ಮೂರರ ಸಂಯೋಜನೆಯ ವಿದೇಶಿಯರ ಆಕ್ರಮಣವು ನಮ್ಮ ಗೆಲುವಿಗೆ ಎರಡನೇ ಪ್ರಮುಖ ಅನಾನುಕೂಲವಾಗಿ ಪರಿಣಮಿಸಿದೆ. ಈ ಬಾರಿ ಪೂರ್ವದೇಶದ ನಮ್ಮ ಸಂಭಾವ್ಯ ಶತ್ರುಗಳು ತಮ್ಮ ಸಾಮರ್ಥ್ಯದ ಪರಾಕಾಷ್ಠೆ ತಲುಪುವ ಸಂದರ್ಭದಲ್ಲಿ ಅಸ್ಥಿರತೆಯ ಸಂಭಾವ್ಯತೆಯಿದೆ. ಈಗ ಎದುರಾಗಿರುವ ಅಪಾಯ ಗಂಭೀರವಾದರೂ ನಾವು ಗೊಂದಲಕ್ಕೆ ಒಳಗಾಗಬಾರದು ಎಂದು ಆತ ಹೇಳಿಕೊಂಡಿದ್ದಾನೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ 2011ರಲ್ಲಿ ನಾರ್ವೆಯಲ್ಲಿ 77 ಮಂದಿಯನ್ನು ಹತ್ಯೆ ಮಾಡಿದ್ದ ನಾರ್ವೆಯ ಬಿಳಿ ರಾಷ್ಟ್ರೀಯತಾವಾದಿ ಆ್ಯಂಡರ್ಸ್ ಬ್ರಿವಿಕ್ರನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.