ಉತ್ತರ ಪ್ರದೇಶ: ಸಚಿವ ಸೇರಿ ಆರು ಸಂಸದರಿಗೆ ಬಿಜೆಪಿ ಕೊಕ್
ಲಕ್ನೊ, ಮಾ. 22: ಕೇಂದ್ರ ಸಚಿವ ಕೃಷ್ಣರಾಜ್, ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ರಾಮಶಂಕರ್ ಕಠಾರಿಯಾ ಸೇರಿದಂತೆ ಆರು ಮಂದಿ ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ.
ಕೃಷ್ಣರಾಜ್ (ಶಹಜರಾನ್ಪುರ- ಪರಿಶಿಷ್ಟ ಜಾತಿ ಮೀಸಲು), ರಾಮಶಂಕರ್ ಕಠಾರಿಯಾ (ಆಗ್ರಾ- ಎಸ್ಸಿ) ಹೊರತುಪಡಿಸಿ ಅಂಶುಲ್ ವರ್ಮಾ (ಹರ್ದೋಯಿ- ಎಸ್ಸಿ), ಬಾಬೂಲಾಲ್ ಚೌಧರಿ (ಫತೇಪುರ ಸಿಕ್ರಿ), ಅಂಜು ಬಾಲಾ (ಮಿಸ್ರಿಕ್- ಎಸ್ಸಿ) ಮತ್ತು ಸತ್ಯಪಾಲ್ ಸಿಂಗ್ (ಸಂಭಾಲ್) ಅವರಿಗೂ ಪಕ್ಷದ ಟಿಕೆಟ್ ಕೈತಪ್ಪಿದೆ.
ಕೃಷ್ಣರಾಜ್ ಅವರು ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರು. ಎಸ್.ಪಿ.ಬಘೇಲ್ (ಆಗ್ರಾ), ಪರಮೇಶ್ವರಲಾಲ್ ಸೈನಿ (ಸಂಭಾಲ್), ರಾಜ್ಕುಮಾರ್ ಛಾಹೆರ್ (ಫತೇಪುರ ಸಿಕ್ರಿ), ಜೈಪ್ರಕಾಶ್ ರಾವತ್ (ಹರ್ದೋಯಿ), ಅಶೋಕ್ ರಾವತ್ (ಮಿಸ್ರಿಖ್) ಮತ್ತು ಅರುಣ್ ಸಾಗರ್ (ಶಹಜಹಾನ್ಪುರ) ಅವರನ್ನು ಕಣಕ್ಕೆ ಇಳಿಸಿದೆ.
ಆದರೆ ಬಿಜೆಪಿ ಉನ್ನಾವೊ ಕ್ಷೇತ್ರದಿಂದ ವಿವಾದಾತ್ಮಕ ಸಂಸದ ಸಾಕ್ಷಿ ಮಹಾರಾಜ್ ಅವರನ್ನು ಮತ್ತೆ ಕಣಕ್ಕಿಳಿಸಿದೆ. ಈ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಅವಕಾಶ ನೀಡದಿದ್ದರೆ ಪರಿಣಾಮ ನೆಟ್ಟಗಾಗದು ಎಂದು ಬಿಜೆಪಿ ನಾಯಕತ್ವಕ್ಕೆ ಸಾಕ್ಷಿ ಮಹಾರಾಜ್ ಸೆಡ್ಡು ಹೊಡೆದಿದ್ದರು.