ಸಮಾಜವಾದಿ ಪಕ್ಷದ ಟಿಕೆಟ್ಗೆ ಕೋಟಿ ರೂ.: ಶಿವಪಾಲ್ ಯಾದವ್ ಆರೋಪ
ಲಕ್ನೊ,ಮಾ.23: ಸಮಾಜವಾದಿ ಪಕ್ಷ ತನ್ನ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡಿದೆ ಮತ್ತು ಪಕ್ಷದ ಟಿಕೆಟನ್ನು ಶ್ರೀಮಂತ ವ್ಯಕ್ತಿಗಳಿಗೆ ಕೋಟಿ ರೂ.ಗೆ ಮಾರಾಟ ಮಾಡುತ್ತಿದೆ ಎಂದು ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) (ಪಿಎಸ್ಪಿಎಲ್)ದ ಮುಖ್ಯಸ್ಥ ಶಿವಪಾಲ್ ಯಾದವ್ ಆರೋಪಿಸಿದ್ದಾರೆ.
ಸಮಾಜವಾದದ ಬಗ್ಗೆ ಜ್ಞಾನವೇ ಇಲ್ಲದವರು ಇಂದು ಪಕ್ಷದ ಟಿಕೆಟ್ ಮಾರಾಟದಲ್ಲಿ ತೊಡಗಿದ್ದಾರೆ. ಶ್ರೀಮಂತ ವ್ಯಕ್ತಿಗಳಿಂದ 10, 15, 20, 25 ಕೋಟಿ ರೂ. ಪಡೆದು ಟಿಕೆಟ್ ನೀಡಲಾಗುತ್ತಿದೆ. ಸಮಾಜವಾದದ ತತ್ವವನ್ನು ಅನುಸರಿಸುವವರನ್ನು ದೂರ ಇಡಲಾಗುತ್ತಿದೆ ಎಂದು ಯಾದವ್ ಆರೋಪಿಸಿದ್ದಾರೆ.
ಸಮಾಜವಾದಿಗಳಾದವರಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣವಿರಲು ಸಾಧ್ಯವಿಲ್ಲ. ಹಾಗಾಗಿ ಅವರು ಹೇಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಜನ ಪ್ರತಿನಿಧಿಗಳಾಗಲು ಸಾಧ್ಯ?, ಸಮಾಜವಾದಿಗಳನ್ನು ನಿಧಾನವಾಗಿ ದೂರ ಮಾಡಲಾಗುತ್ತಿದೆ ಎಂದು ಶಿವಪಾಲ್ ಯಾದವ್ ಖೇದ ವ್ಯಕ್ತಪಡಿಸಿದ್ದಾರೆ. ತನ್ನ ಪಕ್ಷ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್ನ ನಾಯಕರೇ ಅಡ್ಡಗಾಲು ಹಾಕಿದ್ದಾರೆ. ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಜೊತೆ ನಾವು ಮೈತ್ರಿ ಮಾಡಿಕೊಳ್ಳಬೇಕೆಂದು ಜನರು ಬಯಸಿದ್ದರು. ಆದರೆ ಕಾಂಗ್ರೆಸ್ನ ಒಳಗಿರುವ ವ್ಯಕ್ತಿಗಳೇ ಈ ಬಗ್ಗೆ ಹೈಕಮಾಂಡ್ಗೆ ಸುಳ್ಳು ಮಾಹಿತಿ ನೀಡಿ ಈ ಮೈತ್ರಿ ನಡೆಯದಂತೆ ನೋಡಿಕೊಂಡಿದ್ದಾರೆ ಎಂದು ಯಾದವ್ ದೂರಿಕೊಂಡಿದ್ದಾರೆ.